ಶಿವಗಿರಿ ಯಾತ್ರೆಯ 90ನೇ ವಾರ್ಷಿಕೋತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ; ನಾರಾಯಣ ಗುರುಗಳ ಕೊಡುಗೆಗಳ ಸ್ಮರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಜಾತಿ ತಾರತಮ್ಯ ನೀತಿಗಳ ವಿರುದ್ಧದ ಹೋರಾಡಿದ ಕೇರಳದ ಮಹಾನ್‌ ಸಂತ ಮತ್ತು ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಕೇರಳದ ತಿರುವನಂತಪುರದಲ್ಲಿ ಆಯೋಜಿಸಿದ್ದ ಶಿವಗಿರಿ ಯಾತ್ರೆಯ 90 ನೇ ವಾರ್ಷಿಕೋತ್ಸವ ಮತ್ತು ಬ್ರಹ್ಮ ವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಪಾಲ್ಗೊಂಡು ಮಾತನಾಡಿದ ಪ್ರಧಾನಿ, ಮಹಾನ್ ಸಮಾಜ ಸುಧಾರಕ ನಾರಾಯಣ ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನದಿಂದ ಶಿವಗಿರಿ ತೀರ್ಥಯಾತ್ರೆ ಮತ್ತು ಬ್ರಹ್ಮ ವಿದ್ಯಾಲಯವನ್ನು ಪ್ರಾರಂಭಿಸಲಾಯಿತು. ಸಮಾಜ ಸುಧಾರಕರಾದ ನಾರಾಯಣ ಗುರುಗಳು ಧರ್ಮವನ್ನು ಪರಿಷ್ಕರಿಸಿದರು. ಮತ್ತು ಕಾಲಕ್ಕೆ ತಕ್ಕಂತೆ ಬದಲಾಯಿಸಿದರು. ಮನುಜಕುಲ ಒಂದೇ ಎನ್ನುವ ನಾರಾಯಣ ಗುರುಗಳ ಬೋಧನೆಯ ಸಂದೇಶಗಳನ್ನು ಜನರು ಅನುಸರಿಸಿದರೆ, ಜಗತ್ತಿನ ಯಾವುದೇ ಶಕ್ತಿಯು ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಗುರುಗಳ ಸಂದೇಶಗಳು ‘ಆತ್ಮ ನಿರ್ಭರ ಭಾರತ’ದ ಕಡೆಗೆ ದಾರಿ ತೋರುತ್ತವೆ ಎಂದು ಪ್ರಧಾನಿ ಮೋದಿ ಹೇಳಿದರು.
ಜನರಿಗೆ ಜ್ಞಾನದ ಮಾರ್ಗ ತೋರುತ್ತಿರುವ ಬ್ರಹ್ಮ ವಿದ್ಯಾಲಯವು ಇದೀಗ ಸುವರ್ಣ ಮಹೋತ್ಸವದ ಆಚರಿಸಿಕೊಳ್ಳುತ್ತದೆ. ಈ ಪಯಣದಲ್ಲಿ ಇಡೀ ಭಾರತವೇ ಜೊತೆಯಾಗಿದೆ. ವಾರಣಾಸಿಯ ಶಿವನ ನಗರವಾಗಲಿ ಅಥವಾ ವರ್ಕಳದ ಶಿವಗಿರಿಯಾಗಲಿ, ಭಾರತದ ಪ್ರತಿಯೊಂದು ಶಕ್ತಿ ಕೇಂದ್ರವು ಭಾರತೀಯರೆಲ್ಲರ ಜೀವನದಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ. ಈ ಸ್ಥಳಗಳು ಕೇವಲ ತೀರ್ಥಯಾತ್ರೆಯಾತ್ರೆಯ ಸ್ಥಳಗಳಲ್ಲ, ಕೇವಲ ನಂಬಿಕೆಯ ಕೇಂದ್ರಗಳು ಮಾತ್ರವೇ ಅಲ್ಲ, ಅವು ‘ಏಕ ಭಾರತ, ಶ್ರೇಷ್ಠ ಭಾರತದ ಚೈತನ್ಯದ ಜಾಗ್ರತ ಸ್ವರೂಪಗಳಾಗಿವೆ ಎಂದು ಮೋದಿ ಬಣ್ಣಿಸಿದರು.
ಶ್ರೀ ನಾರಾಯಣ ಗುರುಗಳು ಅಂದಿನ ಕಾಲದಲ್ಲಿಯೇ ಆಧುನಿಕ ತತ್ವ ಚಿಂಚನೆಗಳನ್ನು ಪ್ರಚುರಪಡಿಸಿದ್ದಾರೆ. ಅವರು ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಪ್ರಧಾನಿ ಹೇಳಿದರು. ಶ್ರೀ ಗುರುಗಳು ಜನರಿಗೆ ಶಿಕ್ಷಣ ಮತ್ತು ವಿಜ್ಞಾನದ ಅರಿವು ಮೂಡಿಸಿದರು. ಜಾತೀಯತೆಯ ಹೆಸರಿನಲ್ಲಿ ನಡೆಯುತ್ತಿದ್ದ ತಾರತಮ್ಯದ ವಿರುದ್ಧ ತಾರ್ಕಿಕ ಮತ್ತು ಪ್ರಾಯೋಗಿಕ ಹೋರಾಟಗಳನ್ನು ನಡೆಸಿದರು. ದೇಶದ ಬಡವರು, ದೀನದಲಿತರು, ಹಿಂದುಳಿದವರ ಸೇವೆ ನಾವು ಶ್ರಮಿಸುತ್ತರುವುದಕ್ಕೆ ನಾರಾಯಣ ಗುರುಗಳೇ ಸ್ಫೂರ್ತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ರಾಜೀವ್ ಚಂದ್ರಶೇಖರ್ ಮತ್ತು ಶ್ರೀ ವಿ.ಮುರಳೀಧರನ್, ಶಿವಗಿರಿ ಮಠದ ಆಧ್ಯಾತ್ಮಿಕ ಮುಖಂಡರು, ಭಕ್ತರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!