ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿಗೆ ಮತ್ತೆ ರಾಷ್ಟ್ರ ನಾಯಕನ ಎಂಟ್ರಿಯಾಗುತ್ತಿದೆ. 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಲಿರುವ ವಿಶ್ವದ ಅಗ್ರಮಾನ್ಯ ನಾಯಕ ಪ್ರಧಾನಿ ಮೋದಿ ಎದುರುಗೊಳ್ಳಲು ಜಿಲ್ಲೆಯ ಜನತೆ ಕಾತರರಾಗಿದ್ದಾರೆ.
ಏ.14ರಂದು ಮಂಗಳೂರಿಗೆ ಆಗಮಿಸಲಿರುವ ಮೋದಿಯವರು ನಗರದಲ್ಲಿ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಬಿಜೆಪಿ ವತಿಯಿಂದ ಮಂಗಳೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮೋದಿಯವರು ಪಾಲ್ಗೊಳ್ಳುವವರಿದ್ದರು. ಆದರೆ ಸಮಾವೇಶಕ್ಕೆ ಅವಕಾಶ ಸಿಗದೇ ಇರುವುದರಿಂದ ರೋಡ್ ಶೋ ನಡೆಸಲು ನಿರ್ಧರಿಸಲಾಗಿದೆ. ಬಿಜೆಪಿಯ ಶಕ್ತಿ ಕೇಂದ್ರವಾಗಿರುವ ದಕ್ಷಿಣ ಕನ್ನಡದಲ್ಲಿ ಮತ್ತೊಮ್ಮೆ ಕೇಸರಿಯ ಗರ್ಜನೆ ಕೇಳಿ ಬರಲಿದೆ.
ದ.ಕ.ದೊಂದಿಗೆ ಮೋದಿ ನಂಟು
ಕರಾವಳಿ ಜಿಲ್ಲೆಗಳ ಬಗ್ಗೆ ಅಪಾರ ಕಾಳಜಿ ಇರುವ ಪ್ರಧಾನಿಯವರು ದಕ್ಷಿಣ ಕನ್ನಡ ಜಿಲ್ಲೆಗೆ 2017ರಿಂದ ಸತತವಾಗಿ ನಾಲ್ಕು ಬಾರಿ ಭೇಟಿ ನೀಡಿದ್ದಾರೆ. 2014ರಿಂದ 2023ರವರೆಗೆ ಪ್ರಧಾನಿ ಮೋದಿಯವರು ಸತತವಾಗಿ ನಾಲ್ಕು ಭಾರಿ ಭೇಟಿ ನೀಡಿದ್ದಾರೆ. ಪ್ರತಿ ಬಾರಿ ಆಗಮಿಸಿದಾಗಲೂ ಬಿಜೆಪಿಗೆ ಲಾಭವೇ ಆಗಿದೆ.