ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರೊನಾ ಸಾಂಕ್ರಾಮಿಕ ರೋಗದಿಂದ ದೇಶದಲ್ಲಿ ಲಕ್ಷಾಂತರ ಜನ ಸಾವನ್ನಪ್ಪಿದ್ದಾರೆ. ಎಷ್ಟೋ ಮಕ್ಕಳು, ತಂದೆ-ತಾಯಿಯರು ಅನಾಥರಾಗಿದ್ದು, ಅಪಾರ ಜೀವಹಾನಿ ಸೃಷ್ಟಿಮಾಡಿತ್ತು. ಇದೀಗ ಕೊರೊನಾದಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳನ್ನು ಬೆಂಬಲಿಸಲು ಕೇಂದ್ರ ಸರ್ಕಾರ ಯೋಜನೆ ಕೈಗೊಂಡಿದೆ. ಪ್ರಧಾನ ಮಂತ್ರಿಗಳ ಸಹಾಯ ನಿಧಿ (PM Cares) ಮೂಲಕ ಅನಾಥ ಮಕ್ಕಳಿಗೆ ಆರ್ಥಿಕ ನೆರವು ನೀಡಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ.
ಇಂದು (ಮೇ 30) ಸಂತ್ರಸ್ತರಿಗೆ ಕೇಂದ್ರದಿಂದ ನೆರವು ಸಿಗಲಿದೆ. ಯೋಜನೆಯ ಭಾಗವಾಗಿ, ಮಾರ್ಚ್ 11, 2020 ರಿಂದ ಫೆಬ್ರವರಿ 28, 2022 ರ ನಡುವೆ, ಕೋವಿಡ್ ಕಾರಣದಿಂದಾಗಿ ತಂದೆ-ತಾಯಿ, ಪೋಷಕರು, ಒಂಟಿ ತಾಯಂದಿರು ಮತ್ತು ತಂದೆಯನ್ನು ಕಳೆದುಕೊಂಡಿರುವ ಮಕ್ಕಳಿಗೆ ಪಿಎಂ ಕೇರ್ಸ್ನಿಂದ ನೆರವು ನೀಡಲಿದೆ. ಇದು ವಿದ್ಯಾರ್ಥಿವೇತನ, ಭಾರತೀಯ ವೈದ್ಯಕೀಯ ವಿಮಾ ಕಾರ್ಡ್ಗಳು ಮತ್ತು PM ಕೇರ್ಸ್ ಪಾಸ್ ಪುಸ್ತಕಗಳನ್ನು ಒದಗಿಸುತ್ತದೆ.
ಬಾಧಿತ ಮಕ್ಕಳು 18 ವರ್ಷ ತುಂಬುವವರೆಗೆ ಅವರ ಹೆಸರಿನಲ್ಲಿ 10 ಲಕ್ಷ ರೂ.ಗಳನ್ನು ಬ್ಯಾಂಕ್ನಲ್ಲಿ ಠೇವಣಿ ಇಡಲಾಗುತ್ತದೆ. 18 ರಿಂದ 23 ವರ್ಷಗಳ ನಡುವಿನ ಠೇವಣಿಯ ಮೇಲೆ ಗಳಿಸಿದ ಬಡ್ಡಿಯನ್ನು ಅವರಿಗೆ ಆರ್ಥಿಕ ಸಹಾಯವಾಗಿ ನೀಡಲಾಗುತ್ತದೆ. 23 ವರ್ಷಗಳ ನಂತರ ಸಂತ್ರಸ್ತರಿಗೆ ಹತ್ತು ಲಕ್ಷ ಸಂಪೂರ್ಣವಾಗಿ ನೀಡಲಾಗುವುದು. ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಇಂದು ಆರ್ಥಿಕ ನೆರವು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಂತ್ರಸ್ತ ಮಕ್ಕಳು ತಮ್ಮ ವಿವರಗಳನ್ನು ನೋಂದಾಯಿಸಲು ಕೇಂದ್ರ ಸರ್ಕಾರ ವೆಬ್ಸೈಟ್ ಅನ್ನು ಲಭ್ಯಗೊಳಿಸಿದೆ.