ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಿಕ ಮೊದಲನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಕಾಲಿಟ್ಟಿದ್ದು, ನಿನ್ನೆ ರಾತ್ರಿ 8.40ಕ್ಕೆ ಮೈಸೂರಿಗೆ ಬಂದಿಳಿದರು. ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಅಲ್ಲಿಂದ ನೇರವಾಗಿ ರಸ್ತೆ ಮಾರ್ಗದಲ್ಲಿ ರಾತ್ರಿ 8.50ಕ್ಕೆ ಮೈಸೂರಿನ ರಾಡಿಸನ್ ಬ್ಲೂ ಹೋಟೆಲ್ಗೆ ತೆರಳಿದ್ದರು. ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿ. ಇಂದು (ಏ.9) ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 6.20ಕ್ಕೆ ರಾಡಿಸನ್ ಬ್ಲೂ ಹೋಟೆಲ್ನಿಂದ ರಸ್ತೆ ಮಾರ್ಗವಾಗಿ ಮಂಡಕಳ್ಳಿ ಏರ್ಪೋರ್ಟ್ಗೆ ತೆರಳಿ, ಅಲ್ಲಿಂದ ವಿಮಾನದ ಮೂಲಕ ಚಾಮರಾಜನಗರ ಜಿಲ್ಲೆಯ ಬಂಡೀಪುರಕ್ಕೆ ಬಂದಿಳಿದಿದ್ದಾರೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು ರಾಷ್ಟ್ರೀಯ ಹುಲಿ ಸಂರಕ್ಷಿತಾ ಅರಣ್ಯ ಎಂದು ಘೋಷಿಸಿ 50 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ನೀಡಿ ಸಫಾರಿ ನಡೆಸಲಿದ್ದಾರೆ. ಬಂಡೀಪುರದಲ್ಲಿ ಪ್ರಧಾನಿಯವರ ಹೆಲಿಕಾಫ್ಟರ್ ಲ್ಯಾಂಡ್ ಆಗಿದ್ದು, ಕೆಲವೇ ಕ್ಷಣಗಳಲ್ಲಿ ಸಫಾರಿ ಶುರುವಾಗಲಿದೆ.