ಹೊಸದಿಗಂತ ಡಿಜಿಟಲ್ ಡೆಸ್ಕ್ :
2023ರ ಮೊದಲ ʼಮನ್ ಕಿ ಬಾತ್ʼ 97ನೇ ಆವೃತ್ತಿಯ ಇಂದಿನ ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳ ಮಹತ್ವದ ಜೊತೆಗೆ ಮತ್ತಿತರ ವಿಚಾರಗಳ ಕುರಿತು ಮಾತನಾಡಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಧಾನಿಯವರು ಜನರ ಆರೋಗ್ಯಕ್ಕೆ ಯೋಗ ಮತ್ತು ಸಿರಿಧಾನ್ಯ (Millet) ಎಷ್ಟು ಮುಖ್ಯ ಎಂಬುದನ್ನು ಮನ್ ಕೀ ಬಾತ್ನಲ್ಲಿ ತಿಳಿಸಿದರು. ರಾಗಿ ಸೇರಿದಂತೆ ಸಿರಿಧಾನ್ಯಗಳು ಜನರ ಆರೋಗ್ಯವನ್ನು ಹೆಚ್ಚಿಸುತ್ತವೆ. ಜನರು ತಮ್ಮ ಆರೋಗ್ಯಪಾಲನೆಗೆ ಸಿರಿಧಾನ್ಯಗಳ ಸೇವನೆಗೆ ಹೆಚ್ಚು ಒತ್ತುಕೊಡಬೇಕು. ಯೋಗ ಮತ್ತು ಸಿರಿಧಾನ್ಯಗಳನ್ನು ತಮ್ಮ ಜೀವನಶೈಲಿಗೆ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಆಳಂದ ಭೂತಾಯಿ (ಆಳಂದ್ ಭೂತಾಯಿ) ಮಿಲೆಟ್ಸ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿಯು ಕರ್ನಾಟಕದ ಕಲಬುರ್ಗಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್ನ ಮೇಲ್ವಿಚಾರಣೆಯಲ್ಲಿ ಕಳೆದ ವರ್ಷ ಕೆಲಸವನ್ನು ಪ್ರಾರಂಭಿಸಿತು. ಇಲ್ಲಿನ ಖಕ್ರಾ, ಬಿಸ್ಕೆಟ್, ಲಡ್ಡೂಗಳನ್ನು ಜನರು ಇಷ್ಟಪಡುತ್ತಿದ್ದಾರೆ ಎಂದು ಸಿರಿಧಾನ್ಯಗಳಿಂದ ತಯಾರಾದ ಕಲಬುರಗಿ, ಬೀದರ್ನ ವಿಶೇಷ ಖಾದ್ಯಗಳ ಬಗ್ಗೆ ಪ್ರಸ್ತಾಪಿಸಿದರು.
ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ, ಹುಲ್ಸೂರು ರಾಗಿ ಉತ್ಪಾದಕ ಕಂಪನಿಗೆ ಸಂಬಂಧಿಸಿದ ಮಹಿಳೆಯರು ರಾಗಿ ಬೆಳೆಯುವುದರ ಜೊತೆಗೆ ಅವರ ಹಿಟ್ಟನ್ನು ತಯಾರಿಸುತ್ತಿದ್ದಾರೆ. ಈ ಮೂಲಕ ಅವರ ಗಳಿಕೆಯೂ ಸಾಕಷ್ಟು ಹೆಚ್ಚಿದೆ ಎಂದರು. ಈ ಮೂಲಕ ಸಿರಿಧಾನ್ಯ ಉದ್ಯಮಿಗಳ ಶ್ರಮವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ “ಇಂಡಿಯಾ: ದಿ ಮದರ್ ಆಫ್ ಡೆಮಾಕ್ರಸಿ” ಪುಸ್ತಕದ ಕುರಿತು, ಹವಾಮಾನ ಬದಲಾವಣೆ (Climate Change) ವಿರುದ್ಧ ನಡೆಯುತ್ತಿರುವ ಹೋರಾಟದ ಬಗ್ಗೆ ಮತ್ತು ಈ ತಿಂಗಳ ಮೊದಲ ವಾರದಲ್ಲಿ ನಡೆದ ಪರ್ಪಲ್ ಫೆಸ್ಟಿವಲ್ ಬಗ್ಗೆ ಪ್ರಸ್ತಾಪಿಸಿದರು.