ಹೊಸ ದಿಗಂತ ವರದಿ, ಕೊಪ್ಪಳ:
ಗ್ರಾಮೀಣ, ಅಳವಂಡಿ ಹಾಗೂ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ನಾಲ್ಕು ಮನೆಗಳ್ಳತನ ಪ್ರಕರಣವನ್ನು ಬೇಧಿಸಿದ ಪೊಲೀಸರು 15 ಲಕ್ಷ ರೂ. ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ.
ಕನಕಗಿರಿ ತಾಲೂಕಿನ ಹನುಮೇಶ ಹಾಗೂ ಗಂಗಾವತಿ ತಾಲೂಕಿನ ರಾಘವೇಂದ್ರ ಬಂಧಿತ ಆರೋಪಿಗಳು.
ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಯಶೋಧಾ ವಂಟಗೋಡಿ, ಅಳವಂಡಿ ಠಾಣಾ ವ್ಯಾಪ್ತಿಯ ಕಾತರಕಿ ಗುಡ್ಲಾನೂರು ಹಾಗೂ ಅಳವಂಡಿ ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ ದಾಖಲಾಗಿದ್ದು, ಡಿವೈಎಸ್ಪಿ ಶರಣಬಸಪ್ಪ ಸುಬೇದಾರ್ ಮಾರ್ಗದರ್ಶನ ಹಾಗೂ ವೃತ್ತ ನಿರೀಕ್ಷಕ ಮಹಾಂತೇಶ ಸಜ್ಜನ್ ನೇತೃತ್ವದಲ್ಲಿ ತಂಡ ರಚಿಸಲಾಯಿತು ಎಂದರು.
ಆರೋಪಿಗಳಿಗಾಗಿ ಬಲೆ ಬೀಸಿದ ಪೊಲೀಸರು ಇಬ್ಬರನ್ನು ಬಂಧಿಸಿ ಅವರನ್ನು 290 ಗ್ರಾಮ್ ಚಿನ್ನಾಭರಣ , 50 ಸಾವಿರ ರೂ. ಮೌಲ್ಯದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಬಂಗಾರವನ್ನು ಬ್ಯಾಂಕ್ ನಲ್ಲಿ ಅಡವಿಟ್ಟಿದ್ದರು. ಪೊಲೀಸರು ತಾಂತ್ರಿಕ ತಂಡದ ಸಹಾಯ ಪಡೆದು ಪ್ರಕರಣ ಬೇಧಿಸಿದ್ದಾರೆ. ತನಿಖಾ ತಂಡಕ್ಕೆ ವೈಯಕ್ತಿಕವಾಗಿ 20 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.