ಹೊಸದಿಗಂತ ವರದಿ,ಮಂಗಳೂರು:
ರೌಡಿಶೀಟರ್ ಲಿಸ್ಟ್ನಲ್ಲಿ ಗುರುತಿಸಿಕೊಂಡಿದ್ದ ಶರಣ್ ಯಾನೆ ಆಕಾಶಭವನ ಶರಣ್ ಎಂಬಾತನ ಮೇಲೆ ಪೊಲೀಸರು ಗುಂಡುಹಾರಿಸಿದ ಘಟನೆ ಮಂಗಳವಾರ ನಡೆದಿದೆ. ಈತ ಪರಾರಿಯಾಗಲು ಯತ್ನಿಸುವ ವೇಳೆ ಗುಂಡು ಹಾರಿಸಲಾಗಿದ್ದು, ಬಳಿಕ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ನಗರದ ಜೆಪ್ಪು ಕುಡುಪಾಡಿಯಲ್ಲಿ ಘಟನೆ ನಡೆದಿದೆ. ಸಿಸಿಬಿ ಪಿಎಸ್ಐ ಸುದೀಪ್ ನೇತೃತ್ವದ ಪೊಲೀಸರ ತಂಡ ಫೈರಿಂಗ್ ನಡೆಸಿದೆ. ಶರಣ್ ಆಕಾಶಭವನ ವಿರುದ್ಧ ಈಗಾಗಲೇ ಕೊಲೆ, ಕೊಲೆ ಯತ್ನ, ಪೋಕ್ಸೊ ಸೇರಿದಂತೆ ೨೧ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.
ಈತನನ್ನು ಈ ಹಿಂದೆ ಪೊಲೀಸರು ಬಂಧಿಸಲು ತೆರಳಿದ್ದಾಗ ಆತ ಪೊಲೀಸರ ಮೇಲೆಯೇ ತನ್ನ ಕಾರು ಹತ್ತಿಸಲು ಯತ್ನಿಸಿದ್ದ. ಆಸ್ಪತ್ರೆಗೆ ಭೇಟಿ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪ್ ಅಗರವಾಲ್ ಅವರು ಆತನ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.