ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಲ್ಲಿ ಇತ್ತೀಚೆಗೆ ನಡೆದ ಕಾರ್ಮಿಕರ ಹಿಂಸಾತ್ಮಕ ಪ್ರತಿಭಟನೆಯ ಹಿಂದಿನ ಸಂಚುಕೋರನನ್ನು ಕೊನೆಗೂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಪ್ರಕರಣದ ಮಾಸ್ಟರ್ಮೈಂಡ್ ಎಂದು ಗುರುತಿಸಲಾದ ಆದಿತ್ಯ ಆನಂದ್ ಎಂಬಾತನನ್ನು ತಮಿಳುನಾಡಿನ ತಿರುಚಿರಾಪಳ್ಳಿ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಗೌತಮ್ ಬುದ್ಧ ನಗರ ಪೊಲೀಸರು ಮತ್ತು ವಿಶೇಷ ಕಾರ್ಯಪಡೆ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದು, ಆರೋಪಿ ಆದಿತ್ಯ ಆನಂದ್ನನ್ನು ಪತ್ತೆಹಚ್ಚಲು ಹಲವು ರಾಜ್ಯಗಳಲ್ಲಿ ಜಾಲ ಬೀಸಿದ್ದರು. ಅಂತಿಮವಾಗಿ ತಮಿಳುನಾಡಿನಲ್ಲಿ ಸಿಕ್ಕಿಬಿದ್ದ ಆತನ ಬಳಿ ಬರೋಬ್ಬರಿ 1 ಲಕ್ಷ ರೂ. ನಗದು ಪತ್ತೆಯಾಗಿದೆ.
ನೋಯ್ಡಾ ಪ್ರದೇಶದಲ್ಲಿ ಕಾರ್ಮಿಕರ ಧರಣಿ ಮತ್ತು ಪ್ರತಿಭಟನೆಗಳ ಸಮಯದಲ್ಲಿ ಕಾರ್ಮಿಕರನ್ನು ಪ್ರಚೋದಿಸಿ, ದೊಡ್ಡ ಮಟ್ಟದ ಹಿಂಸಾಚಾರಕ್ಕೆ ಸಂಚು ರೂಪಿಸಿದ ಆರೋಪ ಈತನ ಮೇಲಿದೆ. ಈ ಬಗ್ಗೆ ಹಂತ-2 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳೀಯ ನ್ಯಾಯಾಲಯವು ಈತನ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.
ಪ್ರಚೋದನಕಾರಿ ಚಟುವಟಿಕೆಗಳ ಮೂಲಕ ಶಾಂತಿ ಭಂಗ ಉಂಟುಮಾಡಿದ್ದ ಆರೋಪಿಯನ್ನು ಈಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಮುಂದಿನ ಕಾನೂನು ಕ್ರಮಗಳು ಮುಂದುವರಿದಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.



