ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದಲ್ಲಿ ನಿನ್ನೆ ಬಿಜೆಪಿ ನಡೆಸಿದ ಪ್ರತಿಭಟನಾ ಮೆರವಣಿಗೆ ಕುರಿತು ಸಿಎಂ ಮಮತಾ ಬ್ಯಾನರ್ಜಿ ಮಾತನಾಡಿದ್ದು, ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲೆಂದೇ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಆದರೆ ಪೊಲೀಸರು ಗರಿಷ್ಠ ಸಂಯಮದಿಂದ ಇದನ್ನು ತಡೆದಿದ್ದಾರೆ. ಇಲ್ಲವಾದಲ್ಲಿ ಇದು ಗುಂಡು ಹಾರಿಸಿ ತಡೆಯಬೇಕಾಗಿದ್ದ ಪ್ರತಿಭಟನೆಯಾಗಿತ್ತು ಎಂದು ಹೇಳಿದ್ದಾರೆ.
ಬಿಜೆಪಿಯ ಪ್ರತಿಭಟನೆ ಅಶಾಂತಿಗಾಗಿ ನಡೆಸಲಾಗಿದೆ. ಕಾನೂನು ಸುವ್ಯವಸ್ಥೆ ಹಾಳು ಮಾಡಲು ಯೋಜನೆ ರೂಪಿಸಲಾಗಿತ್ತು ಎಂದು ಆರೋಪಿಸಿದರು.ಪ್ರತಿಭಟನಾಕಾರರು ಅನೇಕ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ದಾಳಿಯನ್ನು ತಡೆಯಲು ಪೊಲೀಸರು ಗುಂಡು ಹಾರಿಸಬಹುದಿತ್ತು. ಆದರೆ, ನಮ್ಮ ಪೊಲೀಸರು ಗರಿಷ್ಠ ಸಂಯಮವನ್ನು ಮೆರೆದಿದ್ದಾರೆ ಎಂದು ಮಮತಾ ಬ್ಯಾನರ್ಜಿ ಶಹಬ್ಬಾಸ್ ಹೇಳಿದರು.
ಪ್ರಜಾಸತ್ತಾತ್ಮಕ ಮತ್ತು ಶಾಂತಿಯುತ ಪ್ರತಿಭಟನೆಗಳ ವಿರುದ್ಧ ನಮ್ಮ ತಕರಾರಿಲ್ಲ. ಆದರೆ, ಬಿಜೆಪಿ ಮತ್ತು ಅದರ ಬೆಂಬಲಿಗರು ಹಿಂಸಾಚಾರ, ವಿಧ್ವಂಸಕ ಕೃತ್ಯ ಎಸಗಿದರು. ವಾಹನಿಗಳಿಗೆ ಬೆಂಕಿ ಹಚ್ಚಿ ಅರಾಜಕತೆ ಸೃಷ್ಟಿಸಿದರು. ಆಸ್ತಿ- ಪಾಸ್ತಿ ನಷ್ಟ ಮಾಡಿದ್ದಾರೆ. ಇದು ಜನರಲ್ಲಿ ಭಯವನ್ನು ಹುಟ್ಟುಹಾಕಿದೆ. ಇಂತಹ ವರ್ತನೆಯನ್ನು ಸಹಿಸಲಾಗದು. ಇದರ ತಡೆಗೆ ಕಠಿಣ ಕ್ರಮ ಅಗತ್ಯವಿರುತ್ತದೆ. ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆ. ಇದು ಖಂಡಿತ ಎಂದು ಮಮತಾ ಬ್ಯಾನರ್ಜಿ ಹೇಳಿದರು.