ಹೊಸ ದಿಗಂತ ವರದಿ, ಕಲಬುರಗಿ:
ಸೆ.17ರಂದು ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯಗೊಂಡು 75ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ತಿಳಿಸಿದರು.
ಬುಧವಾರ ಸಂಜೆ ಕೆಕೆಆರ್ಡಿಬಿ ಮಂಡಳಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅಂದು ಬೆಳಗ್ಗೆ 8.30ಕ್ಕೆ ನಗರದ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ ಡಿ.ಎ.ಆರ್ ಪೊಲೀಸ್ ಪರೇಡ್ ಗ್ರೌಂಡ್ ನಲ್ಲಿ 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ. 11 ಗಂಟೆಗೆ ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಅಮೃತ್ ಮಹೋತ್ಸವ ಉತ್ಸವ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಿಳಿದ್ದಾರೆ ಎಂದು ತಿಳಿಸಿದರು.
ಈ ವೇಳೆ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಲಿದ್ದಾರೆ. ಅಲ್ಲದೇ, ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಹಲವು ಜನಪರ ಯೋಜನೆಗಳು ರೂಪಿಸಲಾಗಿದ್ದು, ಮುಖ್ಯಮಂತ್ರಿಗಳು ಅವುಗಳನ್ನು ಘೋಷಿಸಲಿದ್ದಾರೆ ಎಂದರು.
ಈಗಾಗಲೇ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ವತಿಯಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 45 ಕೋಟಿ ರು. ವೆಚ್ಚದಲ್ಲಿ 316 ಹೊಸ ಬಸ್ ಗಳನ್ನು ಖರೀದಿಸಲು ಅನುಮತಿ ನೀಡಿ ಅನುದಾನ ಮಂಜೂರಾತಿ ಬಿಡುಗಡೆ ಮಾಡಲಾಗಿದೆ. 159 ಕೋಟಿ ರು. ವೆಚ್ಚದಲ್ಲಿ 38 ತಾಲೂಕುಗಳಲ್ಲಿ ಹೊಸದಾಗಿ 1060 ಶಾಲಾ ಕೊಠಡಿಗಳ ನಿರ್ಮಾಣ ಕ್ಕೆ ಅನುದಾನ ಮಂಜೂರು ಮಾಡಲಾಗಿದೆ. 7 ಜಿಲ್ಲೆಗಳಲ್ಲಿ 20 ಪರಿಶಿಷ್ಟ ಜಾತಿ ಹಾಗೂ 20 ಪರಿಶಿಷ್ಟ ಪಂಗಡದ ವಸತಿ ನಿಲಯಗಳ ನಿರ್ಮಾಣಕ್ಕಾಗಿ 204 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯಿಂದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಅಭಿವೃದ್ಧಿಗಾಗಿ 40 ಕೋಟಿ ಹಾಗೂ ಕಲಬುರಗಿ ಕೋಟೆಯ ಅಭಿವೃದ್ಧಿಗಾಗಿ 20 ಕೋಟಿ ಅನುದಾನ ಮಂಜೂರು ಮಾಡಲಾಗಿದ್ದು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ವತಿಯಿಂದ ಮೂಲಭೂತ ಸೌಕರ್ಯದ ಅಡಿಯಲ್ಲಿ ಕೈಗಾರಿಕೆ ಹಾಗೂ ಸಂಪರ್ಕ ಹೆಚ್ಚಿಸಲು ರಾಯಚೂರು ವಿಮಾನ ನಿಲ್ದಾಣಕ್ಕಾಗಿ 50 ಕೋಟಿ, ಬಳ್ಳಾರಿ ವಿಮಾನ ನಿಲ್ದಾಣಕ್ಕಾಗಿ 40 ಕೋಟಿ ಹಾಗೂ ಕೊಪ್ಪಳ ವಿಮಾನ ನಿಲ್ದಾಣಕ್ಕೆ 40 ಕೋಟಿ ಅನುದಾನ ಮಂಜೂರಾತಿ ನೀಡಲಾಗಿದೆ. ದೇವದುರ್ಗ ಪಟ್ಟಣದಲ್ಲಿ ಮಂಡಳಿ ವತಿಯಿಂದ ನೂತನ ಇಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ 29 ಕೋಟಿ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಭಗವಂತ ಖುಬಾ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಮುರುಗೇಶ್ ನಿರಾಣಿ, ತೋಟಗಾರಿಕ ಹಾಗೂ ಯೋಜನೆ ಮತ್ತು ಸ್ಯಾಂಖಿಕ ಇಲಾಖೆ ಸಚಿವ ಮುನಿರತ್ನ ಅವರು ಭಾಗವಹಿಸಲಿದ್ದಾರೆ. ಸುಮಾರು 30 ರಿಂದ 40 ಸಾವಿರ ಜನ ಸೇರುವ ನಿರೀಕ್ಷೆಯಿದೆ ಎಂದರು.