ಹೊಸದಿಗಂತ ವರದಿ, ಬಳ್ಳಾರಿ:
ಕಾಂಗ್ರೆಸ್ ನ ಮಹಾನಗರ ಪಾಲಿಕೆ ಸದಸ್ಯರನ್ನು ನಾವು ಸಂಪರ್ಕಿಸಿಲ್ಲ, ಕಾರು, ಹಣದ ಆಮಿಷ ಒಡ್ಡಿಲ್ಲ, ಪುಕ್ಕಟೆ ಪ್ರಚಾರ ಪಡೆಯಲು ಕಾಂಗ್ರೆಸ್ ನವರು ಮಾಡಿದ ಪಿತೂರಿ ಇದು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದರು.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಗರದ ಮಹಾ ಜನತೆ ಕಾಂಗ್ರೆಸ್ ಗೆ ಹೆಚ್ಚು ಬಹುಮತ ನೀಡಿದ್ದು, ಕಾಂಗ್ರೆಸ್ ಸದಸ್ಯರನ್ನು ಹೈಜಾಕ್ ಮಾಡುವ ಪ್ರಶ್ನೆಯೇ ಇಲ್ಲ, ಮಹಾ ಜನತೆ ಅಧಿಕಾರ ನಡೆಸಲು ಆರ್ಶಿವಾದಿಸಿದ್ದಾರೆ. ಹೀಗಿರುವಾಗ ಸದಸ್ಯರಿಗೆ ಹಣ ಹಾಗೂ ಕಾರ್ ಕೊಡಿಸುವ ಆಮಿಷ ಒಡ್ಡುವ ಪ್ರಶ್ನೆಯೇ ಇಲ್ಲ, ಅದು ನಮಗೆ ಬೇಕಿಲ್ಲ, ಅಂತಹ ಸಂಸ್ಕೃತಿ ನಮ್ಮದಲ್ಲ, ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಯನ್ನು ಉದ್ದೇಶ ಪೂರ್ವಕವಾಗಿ ಮುಂದೂಡಲಾಗುತ್ತಿದೆ ಎನ್ನುವುದು ಶುದ್ದ ಸುಳ್ಳು. ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಅವರೇ ಕೆಲ ದಿನಗಳ ಹಿಂದೆ ಮೂಂದೂಡಿ ಎಂದು ಹೇಳಿದ್ದರು. ಇದಕ್ಕೆ ಮಹತ್ವ ಕೊಡುವುದು ಬೇಡ, ನಾವಂತೂ ಸದಸ್ಯರಿಗೆ ಆಮಿಷ ಒಡ್ಡಿಲ್ಲ, ಯಾರು ಒಡ್ಡಿದ್ದಾರೋ ಗೊತ್ತಿಲ್ಲ. ಈ ಬೆಳವಣಿಗೆ ನಮ್ಮಲ್ಲಿ ನಡೆದಿಲ್ಲ, ನಡೆಯೋದು ಇಲ್ಲ, ಇದೆಲ್ಲ ಕಾಂಗ್ರೆಸ್ ನವರ ಸೃಷ್ಟಿ, ಇದಕ್ಕೆ ಉತ್ತರ ಕೋಡೊಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೂಡಾ ಅಧ್ಯಕ್ಷ ಕಾರ್ಕಲತೋಟ ಪಾಲನ್ನ, ವೀರಶೇಖರ್ ರೆಡ್ಡಿ, ಮೋತ್ಕರ್ ಶ್ರೀನಿವಾಸ್, ಕೃಷ್ಣಾ ರೆಡ್ಡಿ ಸೇರಿದಂತೆ ಇತರರಿದ್ದರು.