ಹೊಸದಿಗಂತ ಡಿಜಿಟಲ್ ಡೆಸ್ಕ್
ದಕ್ಷಿಣ ಭಾರತದ ಸ್ಟಾರ್ ನಟ ಅಲ್ಲು ಅರ್ಜುನ್ ಸಿನಿಮಾ ಕಂಡು ಅದೆಷ್ಟು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅವರನ್ನುಜೀವನದ ಹೀರೋ ಎಂದು ಕೊಂಡಾಡುತ್ತಾರೆ.
ಇದೀಗ ಅಲ್ಲು ಕೇವಲ ಸಿನಿಮಾದಲ್ಲಿ ಅಲ್ಲದೆ ನಿಜ ಜೀವನದಲ್ಲೂ ಹೀರೋ ಎಂದು ಸಾಬೀತು ಪಡಿಸಿದ್ದಾರೆ.
ಹೌದು, ನರ್ಸಿಂಗ್ ಅಧ್ಯಯನವನ್ನು ಮುಂದುವರಿಸಲು ದಾರಿ ಕಂಡುಕೊಳ್ಳಲು ಹೆಣಗಾಡುತ್ತಿದ್ದ ಕೇರಳದ ವಿದ್ಯಾರ್ಥಿಯ ಎಲ್ಲಾ ಖರ್ಚುಗಳನ್ನು ಭರಿಸುವ ಮೂಲಕ ನಾಲ್ಕು ವರ್ಷಗಳ ಅವಧಿಯ ಕೋರ್ಸ್ ಅನ್ನು ಪ್ರಾಯೋಜಿಸುವ ಭರವಸೆ ನೀಡಿದ್ದಾರೆ. ಈ ಮೂಲಕ ಆ ವಿದ್ಯಾರ್ಥಿಯ ಕನಸಿಗೆ ಬಲವಾಗಿದ್ದಾರೆ.
ಪಿಯುಸಿ ಅಲ್ಲಿ ಶೇ.92ರಷ್ಟು ಅಂಕ ಗಳಿಸಿದ್ದ ಶಿ ಬಡ ವಿದ್ಯಾರ್ಥಿನಿಗೆ ಸಹಾಯ ಮಾಡಲು ಪುಷ್ಪ ನಟ ಅಲ್ಲು ಅರ್ಜುನ್ ಮುಂದಾಗಿದ್ದಾರೆ. ಅಲಪ್ಪುಳ ಜಿಲ್ಲಾಧಿಕಾರಿ ಕೃಷ್ಣ ತೇಜಾ ಅವರು ವಿದ್ಯಾರ್ಥಿನಿಯ ಕಥೆ ವಿವರಿಸಿ ವೈಯಕ್ತಿಕ ಮನವಿ ಮಾಡಿದ ನಂತರ ಅಲ್ಲು ಅರ್ಜುನ್ ವಿದ್ಯಾರ್ಥಿಯ ಸಹಾಯಕ್ಕೆ ಬಂದಿದ್ದಾರೆ. ಅಲ್ಲು ಅರ್ಜುನ್ ಅವರು ‘ವಿ ಫಾರ್ ಅಲೆಪ್ಪಿ’ ಯೋಜನೆಯ ಭಾಗವಾಗಿ ವಿದ್ಯಾರ್ಥಿಯ ನರ್ಸಿಂಗ್ ಕೋರ್ಸ್ನ ಎಲ್ಲ ವೆಚ್ಚವನ್ನು ಭರಿಸಲು ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಕೃಷ್ಣ ತೇಜಾ ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ”ಕೆಲ ದಿನಗಳ ಹಿಂದೆ ಅಲಪ್ಪುಳದ ವಿದ್ಯಾರ್ಥಿನಿಯೊಬ್ಬರು ನನ್ನನ್ನು ಭೇಟಿಯಾಗಲು ಬಂದಿದ್ದರು. ಆಕೆ ಪಿಯುಸಿ ಅಲ್ಲಿ ಶೇ. 92ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಆದರೆ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ಪರಿಸಸ್ಥಿತಿ ಸಹಕರಿಸುತ್ತಿಲ್ಲ. 2021ರಲ್ಲಿ ಕೋವಿಡ್ಗೆ ತುತ್ತಾಗಿ ಅವರ ತಂದೆ ಮೃತಪಟ್ಟಿದ್ದು, ಕುಟುಂಬ ಕಷ್ಟದಲ್ಲಿದೆ. ನಾನು ಆ ಹುಡುಗಿಯ ಕಣ್ಣಲ್ಲಿ ಸಾಧಿಸುವ ಛಲ ಕಂಡೆ. ಅವಳಿಗೆ ‘ವಿ ಫಾರ್ ಅಲೆಪ್ಪಿ’ ಯೋಜನೆಯಡಿ ಸಹಾಯ ಮಾಡಲು ನಿರ್ಧರಿಸಿದೆ.
ಆಕೆ ನರ್ಸ್ ಆಗುವ ಇಂಗಿತ ವ್ಯಕ್ತಪಡಿಸಿದರು. ನರ್ಸ್ ಮೆರಿಟ್ ಸೀಟ್ಗಳಿಗೆ ಅರ್ಜಿ ಸಲ್ಲಿಸುವ ಸಮಯ ಈಗಾಗಲೇ ಮುಗಿದಿದೆ. ಹಾಗಾಗಿ ನಾವು ವಿದ್ಯಾರ್ಥಿನಿಯ ಕನಿಷ್ಠ ಮ್ಯಾನೇಜ್ಮೆಂಟ್ ಕೋಟಾದಡಿಯಲ್ಲಿ ಸೀಟು ಕೊಡಿಸುವ ಪ್ರಯತ್ನ ಮಾಡಿದೆವು. ನಾವು ಅನೇಕ ಕಾಲೇಜುಗಳನ್ನು ಸಂಪರ್ಕಿಸಿದೆವು.ಅಂತಿಮವಾಗಿ ಕತ್ತನಂ ಸೇಂಟ್ ಥಾಮಸ್ ನರ್ಸಿಂಗ್ ಕಾಲೇಜಿನಲ್ಲಿ ಸೀಟ್ ಪಡೆದುಕೊಂಡಿದ್ದೇವೆ. ನಾವು ಸಹಾಯಕರನ್ನು ಹುಡುಕಲು ಪ್ರಾರಂಭಿಸಿದೆವು. ಬಳಿಕ ನಟ ಅಲ್ಲು ಅರ್ಜುನ್ರನ್ನು ಸಂಪರ್ಕಿಸಿದೆ. ಅವರು ಕೇವಲ ಒಂದು ವರ್ಷವಲ್ಲ, ನಾಲ್ಕು ವರ್ಷಗಳ ಕಾಲದ ಶಿಕ್ಷಣ ವೆಚ್ಚವನ್ನು ಭರಿಸಲು ಒಪ್ಪಿದರು. ನಾನು ಖುದ್ದಾಗಿ ಹೋಗಿ ವಿದ್ಯಾರ್ಥಿನಿಯನ್ನು ಕಾಲೇಜಿಗೆ ಸೇರಿಸಿ ಬಂದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ