ನಮ್ಮ ಪಕ್ಷದ ಸಮಸ್ಯೆ ನಾವೇ ಪರಿಹರಿಸಿಕೊಳ್ಳುತ್ತೇವೆ ಡೋಂಟ್ ವರಿ ಎಂದ ಜೋಶಿ!

ಹೊಸದಿಗಂತ ವರದಿ ಹುಬ್ಬಳ್ಳಿ:

ಗೆಲ್ಲುವ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುತ್ತದೆ. ಆಗಿರುವಂತಹ ಎಲ್ಲ ಗೊಂದಲಗಳನ್ನು ನಿವಾರಿಸುವಲ್ಲಿ ಪಕ್ಷ ಯಶಸ್ವಿಯಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

ಶುಕ್ರವಾರ ನಗರದ ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾವನಾತ್ಮಕತೆ ಹೊಂದಿರುವ ಕಾರ್ಯಕರ್ತರು ನಮ್ಮ ಪಕ್ಷದಲ್ಲಿದ್ದಾರೆ. ಶೇ. 99 ರಷ್ಟು ಸಮಸ್ಯೆಯನ್ನು ನಾವು ಬಗೆಹರಿಸುತ್ತೇವೆ ಎಂದರು.

ಇಲ್ಲಿಯ ವರೆಗೂ 52ಜನ ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ನವರ ಹಾಗೆ ಕುಟುಂಬ ರಾಜಕಾರಣ ಮಾಡುತ್ತಿಲ್ಲ. ಪ್ರಧಾನಿ ಮೋದಿ ಪ್ರಧಾನಿಯಾದ ಬಳಿಕ ಪ್ರಜಾಪ್ರಭುತ್ವ ಆಶೆಯದಂತೆ ಪಕ್ಷಕ್ಕಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಟಿಕೆಟ್ ನೀಡುವ ಹೊಸ ಪ್ರಯೋಗವಾಗಿದೆ ಎಂದು ಹೇಳಿದರು.

ಶಾಸಕ ನಿಬ್ಬಣ್ಣವರ ಹಿರಿಯರಿದ್ದಾರೆ.‌ ಟಿಕೆಟ್ ತಪ್ಪಿದ ಸಿಟ್ಟಿನಲ್ಲಿ ಏನೋ ಮಾತನಾಡಿದ್ದಾರೆ. ಇವತ್ತು ಅವರೊಂದಿಗೆ ಮಾತನಾಡುತ್ತೇನೆ. ಈಗಾಗಲೇ ಎರಡು ಮೂರು ಮಾತನಾಡಿದ್ದೇನೆ. ಅವರು ಪಕ್ಷ ಬಿಟ್ಟು ಹೋಗಲ್ಲ ಎಂದು ಹೇಳಿದರು.

ಲಕ್ಷ್ಮಣ ಸವದಿ ಅವರಿಗೆ ಪಕ್ಷದಲ್ಲಿ ಬಹಳ ಮಹತ್ವ ನೀಡಿದ್ದೇವೆ. ಅವರು ಕಾಂಗ್ರೆಸ್ ಹೋಗಬಾರದು ಎಂಬುದು ನಮ್ಮ ಅಪೇಕ್ಷೆಯಾಗಿದೆ. ಇಲ್ಲಿಯೇ ಅವರಿಗೆ ಉತ್ತಮ ಅವಕಾಶವಿದೆ. ಕಾಂಗ್ರೆಸ್ ಬಳಸಿ ಬಿಸಾಡುವ ಪಕ್ಷವಾಗಿದೆ ಎಂದು ಕುಟುಕಿದರು.

ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ ಅವರ ಟಿಕೆಟ್ ನೀಡುವ ವಿಚಾರ ರಾಷ್ಟ್ರೀಯ ನಾಯಕರು ಗಂಭೀರವಾಗಿ ಪರಿಗಣಿಸಿದ್ದಾರೆ. ನಾವು ಅವರಿಗೆ ಟಿಕೆಟ್ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ. ಬರುವ ದಿನಗಳಲ್ಲಿ ಎಲ್ಲವೂ ಸುಲಲಿತವಾಗಿ ಪರಿಹಾರ ವಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!