ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರಳಿ ಹೂವನ್ನು ದೇವಸ್ಥಾನಗಳಲ್ಲಿ ಪೂಜೆಗೆ ಬಳಸಬಹುದು ಎಂಬ ಕೇರಳದ ದೇವಸ್ವಂ ಮಂಡಳಿಯ ನಿರ್ಧಾರಕ್ಕೆ ಅಖಿಲ ಕೇರಳ ತಂತ್ರಿ ಸಮಾಜ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರಸಾದ ಮತ್ತು ಪೂಜೆ ಎರಡು ಪ್ರತ್ಯೇಕವಲ್ಲ. ನೈವೇದ್ಯದಲ್ಲಿ ಕ್ರಿಯಾ ಅಂಗವಾಗಿ ಪೂಜೆ ಮಾಡಿದ ಪುಷ್ಪ ಅರ್ಪಿಸಬೇಕು. ಪೂಜೆಯ ಶುದ್ಧ ಹೂವು ಭಕ್ತರಿಗೆ ಪ್ರಸಾದವಾಗಿ ನೀಡಬೇಕು. ದೇವಸ್ವಂ ಮಂಡಳಿಗಳು ಪೂಜೆಯ ಮೂಲಭೂತ ವಿಷಯಗಳನ್ನೇ ಅರ್ಥ ಮಾಡಿಕೊಂಡಿಲ್ಲ. ಆತುರದ ನಿರ್ಧಾರಕ್ಕೆ ಬಂದಿವೆ ಎಂದು ಸಮಾಜದ ಪ್ರಧಾನ ಕಾರ್ಯದರ್ಶಿ ಪುದಯೂರು ಜಯನಾರಾಯಣನ್ ನಂಬೂದಿರಿಪಾಡ್ ತಿಳಿಸಿದ್ದಾರೆ.
ಅರಳಕಿ ಹೂವಿನ ವಿಚಾರವಾಗಿ ದೇವಸ್ವಂ, ತಂತ್ರಿಯವರ ಅಭಿಪ್ರಾಯ ಕೇಳಿಲ್ಲ. ಪೂಜೆಯ ವಿಚಾರದಲ್ಲಿ ಯಾವುದೇ ನಿರ್ಧಾರಗಳು ಅಗತ್ಯವಾದಾಗ ದೇವಸ್ಥಾನದ ಆಚಾರ್ಯರ ಅಭಿಪ್ರಾಯ ಪಡೆಯಬೇಕು. ಇಲ್ಲವಾದಲ್ಲಿ ಇಂತಹ ಅಪಸವ್ಯಗಳಿಗೆ ಕಾರಣವಾಗುತ್ತದೆ. ಬೇರೆ ರಾಜ್ಯಗಳಿಂದ ಬರುವ ಹೂವುಗಳ ಬದಲಿಗೆ ಪ್ರತಿ ದೇವಸ್ಥಾನದಲ್ಲಿ ಪೂಜಾ ಪುಷ್ಪ ಉದ್ಯಾನಗಳನ್ನು ನಿರ್ಮಿಸಿಕೊಳ್ಳಲು ದೇವಸ್ವಂ ಮಂಡಳಿಗಳು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ದೇವಸ್ವಂ ಅಧೀನದಲ್ಲಿರುವ ಎಲ್ಲಾ ದೇವಸ್ಥಾನಗಳಲ್ಲಿ ನೈವೇದ್ಯ ಹಾಗೂ ಪ್ರಸಾದದಲ್ಲಿ ಅರಳಿ ಹೂವು ಕೈಬಿಟ್ಟು, ಪೂಜೆ, ಅರ್ಚನೆಗೆ ಮಾತ್ರ ಬಳಸುವಂತೆ ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಹೇಳಿದ್ದರು. ಇದೀಗ ಅಖಿಲ ಕೇರಳ ತಂತ್ರಿ ಸಮಾಜವು ಪೂಜೆಗೆ ಸೂಚಿಸಲಾದ ಸಾಂಪ್ರದಾಯಿಕ ಹೂವುಗಳನ್ನು ಹೊರತುಪಡಿಸಿ ನಕಾರಾತ್ಮಕ ಅಂಶ ಹೊಂದಿರುವ ಯಾವುದೇ ಹೂವನ್ನು ಪೂಜೆಗೆ ಬಳಸಬಾರದು ಎಂದು ಕೇರಳ ತಂತ್ರಿ ಸಮಾಜ ಹೇಳಿದೆ.