ಹೊಸದಿಗಂತ ವರದಿ,ಅಂಕೋಲಾ:
ಗಾಂವಕರ್ ಮೆಮೋರಿಯಲ್ ಫೌಂಡೇಶನ್ ಆಶ್ರಯದಲ್ಲಿ 11 ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜನವರಿ 1 ರಂದು ಸಂಜೆ 4 ಗಂಟೆಯಿಂದ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದಲ್ಲಿ ನಡೆಯಲಿದೆ.
ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ಜಿಲ್ಲೆಯ ಪ್ರತಿಭೆಗಳಿಗೆ ಪುರಸ್ಕರಿಸಿ ಗೌವರವಿಸುತ್ತ ಬಂದಿರುವ ಗಾಂವಕರ್ ಮೆಮೋರಿಯಲ್ ಟ್ರಸ್ಟ್ ಈ ವರ್ಷವೂ 10 ಜನ ಸಾಧಕರನ್ನು ಗೌರವಿಸಲಿದೆ.
ವ್ಯಕ್ತಿ ಚಿತ್ರಕಲೆಯಲ್ಲಿ ಕಲಾರತ್ನ ಪ್ರಶಸ್ತಿ ವಿಜೇತ ಹಳಿಯಾಳದ ಶ್ರೇಯಾಂಕ ಅಶೋಕ ಪಾಟೀಲ್, ಶೈಕ್ಷಣಿಕ ರಂಗದಲ್ಲಿ ಉತ್ತಮ ನಿರ್ವಹಣೆ ತೋರಿ ಚೆನ್ನೈ ನ ಐಐಟಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಂಕೋಲಾದ ಚಿರಾಗ ವಿ.ಗಾಂವಕರ್, ಹಿಂದಿ ಭಾಷೆಯಲ್ಲಿ ರಾಷ್ಟ್ರ ಗೀತೆಯನ್ನು ಎಲೆಯಲ್ಲಿ ಚಿತ್ರಿಸಿ ಇಂಡಿಯಾ ಬುಕ್ ಆಪ್ ರೆಕಾರ್ಡ್ ನಲ್ಲಿ ಆಯ್ಕೆಯಾದ ಸಿದ್ಧಾಪುರದ ತೃಪ್ತಿ ಮಂಜುನಾಥ ನಾಯ್ಕ, ಕಾಮನ್ ವೆಲ್ತ್ ಪವರ್ ಲಿಪ್ಟಿಂಗ್ ಪಂದ್ಯಾವಳಿಯಲ್ಲಿ ಬಂಗಾರ ಪದಕ ವಿಜೇತ ಕ್ರೀಡಾಪಟು ಕಾರವಾರದ ಪ್ರತೀಕ್ಷಾ ಗಣಪತಿ ನಾಯ್ಕ, ದೇಶಿ ಕಾವಿ ಕಲೆಯ ಪ್ರತಿಭಾನ್ವಿತ ಚಿತ್ರ ಕಲಾವಿದ ಗೋಕರ್ಣದ ರವಿ ಗುನಗಾ, ಅರಣ್ಯ ವೈವಿದ್ಯತೆಗಳ ಬಂಗಾರದ ಪದಕ ವಿಜೇತ ಬೋಧಕ ಶಿರಶಿಯ ಶಹಬಾಜ್ ಸೂರಿ, ಬಂಗಾರ ಪದಕ ವಿಜೇತ ನೇತ್ರ ಚಿಕಿತ್ಸಕ ವೈದ್ಯೆ ಹೊನ್ನಾವರದ ಡಾ.ವರ್ಷಾ ಪ್ರಭು,
ಸ್ನಾತಕೋತ್ತರ ಪದವಿಯಲ್ಲಿ ಬಂಗಾರದ ಪದಕ ವಿಜೇತ ಗೌಳಿ ಸಮಾಜದ ಪ್ರತಿಭೆ ಮುಂಡಗೋಡದ ಸುವರ್ಣ ದಾಕಲು ಪಾಟೀಲ, ಅರಣ್ಯ ಮತ್ತು ಶಿಲೀಂದ್ರಗಳ ಅಧ್ಯಯನಕ್ಕೆ ಜರ್ಮನಿ ವಿಶ್ವ ವಿದ್ಯಾಲಯದ ಡಾಕ್ಟರೇಟ್ ಪದವಿ ಪಡೆದ ವನಪಾಲಕ ರಾಮನಗರದ ಡಾ.ಗುಂಡಪ್ಪ ಶಾಮರಾಯ ಮತ್ತು ವಾಯುಪಡೆಯ ವಿಂಗ್ ಕಮಾಂಡರ್ ಭಟ್ಕಳದ ನಿತಿನ್ ಡಿಕೋಸ್ತ ಈ ಬಾರಿಯ ಯುವ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಜೊತೆಗೆ ಸಿದ್ಧಾಪುರದ ಸ್ವಾತಂತ್ರ್ಯ ಹೋರಾಟಗಾರ್ತಿ ಹಸಲರ ದೇವಿ ಸಂಸ್ಕರಣೆ, ಕಲೆಕ್ಟರ್ ಗೋನೆಹಳ್ಳಿ ವೆಂಕಣ್ಣ ನಾಯಕ ಅವರ ಜೀವನದ ಕುರಿತು ಉಪನ್ಯಾಸ, ಯಕ್ಷನೃತ್ಯ, ಯಕ್ಷಗೀತ, ಗಾಯನ ಮೊದಲಾದ ವೈಚಾರಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.