ಹೊಸದಿಗಂತ ವರದಿ, ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಜು.26 ರಂದು ನಡೆದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಓರ್ವನನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ)ಬಂಧಿಸಿದೆ. ಇದರೊಂದಿಗೆ ಬಂಧಿತರ ಒಟ್ಟು ಸಂಖ್ಯೆ 14ಕ್ಕೆ ಏರಿಕೆಯಾದಂತಾಗಿದೆ.
ಶನಿವಾರ ಬೆಳಗ್ಗೆ ದಾಳಿ ನಡೆಸಿದ ಎನ್ಐಎ ತಂಡ ಈಗಾಗಲೇ ಎನ್ಐಎ ಬಂಧನದಲ್ಲಿರುವ ಎಸ್ಡಿಪಿಐ ಮುಖಂಡ ಶಫಿ ಬೆಳ್ಳಾರೆಯ ಭಾವ ಸಾಹಿದ್ ಬೆಳ್ಳಾರೆ(34) ಎಂಬಾತನ್ನು ಬಂಧಿಸಿ ವಿಚಾರಣೆಗೊಳಪಡಿಸಿದೆ.
ಪ್ರವೀಣ್ ನೆಟ್ಟಾರು ಹತ್ಯೆಗೆ ಒಳಸಂಚು ರೂಪಿಸಿದ ಆರೋಪ ಸಾಹಿದ್ ಬೆಳ್ಳಾರೆಯ ಮೇಲಿದೆ. ಈತ ಬೆಳ್ಳಾರೆಯಲ್ಲಿ ಅಡಕೆ ವ್ಯಾಪಾರ ಮಾಡುತ್ತಿದ್ದು, ದುಷ್ಕೃತ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳಿಗೆ ಸಾಹಿದ್ ಬೆಳ್ಳಾರೆ ಕೂಡ ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿದೆ.