ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಪತಿ ಚುನಾವಣಾ ಕಣ ರಂಗೇರಿದೆ. ಈಗಾಗಲೇ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು , ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದರ ನಡುವೆ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ರೈತ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ಇಷ್ಟೇ ಅಲ್ಲ ತನಗೆ ಹಲವು ಸಂಸದರು, ಶಾಸಕರು, ಸಚಿವರ ಬೆಂಬಲವಿದೆ. ತನ್ನ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪತಿ ಚುನಾವಣಾ ಕಣದಲ್ಲಿ ಇದೀಗ ಕೇಳಿ ಬಂದ ಹೊಸ ಹೆಸರು ರೈತ ವಿನೋದ್ ಕುಮಾರ್ ಯಾದವ್. 10ನೇ ತರಗತಿವರೆಗೆ ಓದಿರುವ ವಿನೋದ್ ಕುಮಾರ್ ರೈತನಾಗಿದ್ದಾರೆ. ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿರುವ ರೈತ, ತಾನು 10 ರಾಜ್ಯಗಳ ನಾಯಕರು ಹಾಗೂ ಪಕ್ಷಗಳ ಜೊತೆ ಮಾತುಕತೆ ನಡೆಸಿದ್ದೇನೆ. ಎಲ್ಲರೂ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ತನ್ನ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಕೇವಲ ರೈತ ಮಾತ್ರವಲ್ಲ, ಲಿಮ್ಕಾ ಬುಕ್ನಲ್ಲಿ ದಾಖಲೆ ಬರೆದಿರುವ ಕೆ ಪದ್ಮರಾಜನ್ ಕೂಡ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಗ್ರಾಮ ಪಂಚಾಯಿತ್ನಿಂದ ಹಿಡಿದು ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಕೆ ಪದ್ಮರಾಜನ್ ಇದುವರೆಗೂ ಯಾವುದೇ ಚುನಾವಣೆಯಲ್ಲಿ ಗೆದ್ದ ಇತಿಹಾಸವಿಲ್ಲ.
ಮತ್ತೊರ್ವ ನಾಗರೀಕರ ರಾಮ್ ಕುಮಾರ್ ಶುಕ್ಲಾ ಕೂಡ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಸಾಮಾನ್ಯ ನಾಗರೀಕನಾಗಿರುವ ತನಗೆ ದೇಶದ ಬಹುತೇಕ ವರ್ಗದ ಜನರ ನಾಡಿಮಿಡಿತದ ಅರಿವಿದೆ. ಹೀಗಾಗಿ ತಾನು ಮುಂದಿನ ರಾಷ್ಟ್ರಪತಿಯಾಗಲು ಸೂಕ್ತ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ.
ಇವರಲ್ಲದೆ ಹಲವು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಹಾಗೂ ಸೇನಾ ಶ್ರೇಯೋಭಿವೃದ್ಧಿ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅಶೋಕ್ ಕುಮಾರ್ ದಿಂಗ್ರಾ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರೋಫೆಸರ್ ದಶಾ ಶಂಕರ್ ಅಗರ್ವಾಲ್ ಕೂಡ ನಾಮಪತ್ರ ಸಲ್ಲಿಸಿದಜ್ದಾರೆ.
ದ್ರೌಪದಿ ಮುರ್ಮು , ಯಶವಂತ್ ಸಿನ್ಹ ಸೇರಿದಂತೆ ಇದುವರೆಗೆ ಒಟ್ಟು 56 ಮಂದಿ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಜೂನ್ 29ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಜುಲೈ 2ರ ವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಇನ್ನು ಜುಲೈ 21ಕ್ಕೆ ಎತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟಗೊಳ್ಳಲಿದೆ.