ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ನಡುವೆ ಸಿಎಂ ಉದ್ಧವ್ ಠಾಕ್ರೆ ಬಂಡಾಯ ಶಾಸಕರಿಗೆ ಭಾವನಾತ್ಮಕ ಮನವಿ ಮಾಡಿದ್ದಾರೆ.
ಸರ್ಕಾರದ ವಿರುದ್ಧ ಬಂಡಾಯವೆದ್ದು ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಶಿವಸೇನೆಯ ಶಾಸಕರಿಗೆ ಠಾಕ್ರೆ ವಿಶೇಷ ಮನವಿ ಮಾಡಿಕೊಂಡಿದ್ದು, ನಿಮ್ಮ ಭಾವನೆಗಳನ್ನು ನಾವು ಗೌರವಿಸುತ್ತೇನೆ. ಇಲ್ಲಿ ಬಂದು ಚರ್ಚಿಸಿ ಎಂದು ತಿಳಿಸಿದ್ದಾರೆ.
‘ಬಂಡಾಯ ಶಾಸಕರೇ, ಶಿವಸೇನೆ ನಿಮಗೆ ನೀಡಿರುವ ಗೌರವವನ್ನ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ನಿವೇಲ್ಲಾ ಶಾಸಕರು, ನನ್ನ ಹೃದಯದಲ್ಲಿದ್ದೀರಾ. ಇನ್ನು ಕಾಲ ಮಿಂಚಿಲ್ಲ, ಬನ್ನಿ ಒಟ್ಟಿಗೆ ಕೂತು ಸಮಸ್ಯೆ ಬಗೆಹರಿಸಿಕೊಳ್ಳೋಣಾ, ಖಂಡಿತವಾಗಿಯೂ ಮಾರ್ಗ ಸಿಗುತ್ತೆ’ ಎಂದಿದ್ದಾರೆ.
‘ಗುವಾಹಟಿಯಲ್ಲಿರುವ ಅನೇಕ ಶಾಸಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಹೃದಯದಿಂದ ನೀವೆಲ್ಲರೂ ಶಿವಸೇನೆಯಲ್ಲಿದ್ದೀರಿ. ನಿಮ್ಮ ಸಮಸ್ಯೆಗಳ ಬಗ್ಗೆ ಇಲ್ಲಿಗೆ ಬಂದು ಚರ್ಚಿಸಿ’ , ನಿಮ್ಮ ಕುಟುಂಬದ ಕೆಲ ಸದಸ್ಯರೂ ನನ್ನ ಸಂಪರ್ಕದಲ್ಲಿದ್ದು, ನಿಮ್ಮ ಭಾವನೆಗಳ ಬಗ್ಗೆ ತಿಳಿಸಿದ್ದಾರೆ’ ಎಂದಿದ್ದಾರೆ.
‘ನಾನು ಇಂದಿಗೂ ನಿಮ್ಮ ಬಗ್ಗೆ ಚಿಂತಿತನಾಗಿದ್ದೇನೆ. ಆ ಸಮಯ ಇನ್ನೂ ಮುಗಿದಿಲ್ಲ. ಶಿವಸೇನೆ ಕುಟುಂಬದ ಮುಖ್ಯಸ್ಥನಾಗಿ ನಿಮ್ಮ ಭಾವನೆಗಳನ್ನು ಗೌರವಿಸುತ್ತೇನೆ. ಗೊಂದಲ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ. ಒಟ್ಟಿಗೆ ಕುಳಿತು ದಾರಿ ಹುಡುಕೋಣ. ನನ್ನ ಮುಂದೆ ಬಂದು ಮಾತನಾಡಿದರೆ ಖಂಡಿತವಾಗಿ ದಾರಿ ಸಿಗಲಿದೆ’ ಎಂದು ಉದ್ಧವ್ ಠಾಕ್ರೆ ಮನವಿ ಮಾಡಿದರು.