ಹೊಸ ದಿಗಂತ ಡಿಜಿಟಲ್ ಡೆಸ್ಕ್
ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣ ಎಂದು ಕರೆಯುವ ಮೂಲಕ ಇಡೀ ದೇಶಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವಮಾನ ಮಾಡಿದ್ದಾರೆ.
ಇದು ಅತ್ಯಂತ ಅವಹೇಳನಕಾರಿ, ಅತ್ಯಂತ ನಾಚಿಕೆಗೇಡಿನ ವಿಚಾರ. ಕೂಡಲೇ ಅವರು ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆಗ್ರಹಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರ ಅಭಿವೃದ್ಧಿ ಕೆಲಸಗಳನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರ ಹೊಟ್ಟೆ ಕಿವುಚುತ್ತಿದೆ. ಹಾಗಾಗಿ ಖರ್ಗೆಯವರು ಪ್ರಧಾನಿಯವರನ್ನು ರಾವಣ ಅಂತ ಕರೆದಿದ್ದಾರೆ. ಇದು ನಾಚಿಕೆಗೇಡಿನ ವಿಷಯ. ಇಡೀ ಜಗತ್ತೇ ಮೋದಿಯವರ ಕಡೆ ನೋಡುತ್ತಿದೆ. ಹಾಗೆ ನೋಡಿದರೆ ಪ್ರಧಾನಿಯವರನ್ನು ಖರ್ಗೆ ಮುತ್ಸದ್ಧಿ ಅಂತ ಕರೆಯಬೇಕಾಗಿತ್ತು. ಆದರೆ, ರಾವಣ ಎಂದು ಕರೆದು ದೇಶದ ಜನತೆಗೆ ಅವಮಾನ ಮಾಡಿದ್ದಾರೆ. ಹಾಗಾಗಿ ಮಲ್ಲಿಕಾರ್ಜುನ ಖರ್ಗೆಯವರು ಇಡೀ ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ರೌಡಿಸಂಗೆ ಪ್ರೋತ್ಸಾಹ ಕೊಟ್ಟಿದ್ದೇ ಕಾಂಗ್ರೆಸ್: ಸೈಲೆಂಟ್ ಸುನೀಲನ ಜತೆ ಬಿಜೆಪಿ ನಾಯಕರ ವೇದಿಕೆ ಹಂಚಿಕೆ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ರವಿಕುಮಾರ್, ರೌಡಿಸಂಗೆ, ಭಯೋತ್ಪಾದನೆಗೆ ಪ್ರೋತ್ಸಾಹ ಕೊಟ್ಟಿದ್ದೇ ಕಾಂಗ್ರೆಸ್. ಕಾಂಗ್ರೆಸ್ ಅತ್ಯಂತ ದುರವಸ್ಥೆಯಲ್ಲಿದೆ. ಕಾಂಗ್ರೆಸ್ನ ಯೂತ್ ಅಧ್ಯಕ್ಷ ಯಾರು? ಕನ್ಹಯ್ಯ ಕುಮಾರ್ ಇರೋದು ಕಾಂಗ್ರೆಸ್ನಲ್ಲಿ ಅನ್ನೋದು ನೆನಪಿರಲಿ. ಕಾಂಗ್ರೆಸ್ನಲ್ಲಿ ಇರೋ ರೌಡಿಗಳ ಪಟ್ಟಿ ಉದ್ದ ಇದೆ ಎಂದು ಮಲ್ಲಿಕಾರ್ಜುನ ಖರ್ಗೆಗೆ ತಿರುಗೇಟು ನೀಡಿದರು.