ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ಆಂಧ್ರ ಪ್ರದೇಶದ ಲೇಪಾಕ್ಷಿಯಲ್ಲಿರುವ ವೀರಭದ್ರ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ತೆಳುಗಿನಲ್ಲಿರುವ ರಂಗನಾಥ ರಾಮಾಯಣದ ಪದ್ಯಗಳನ್ನುಆಲಿಸಿದರು.
ಈ ವೇಳೆ ದೇವಾಲಯದಲ್ಲಿ ರಾಮಾಯಣ ಮಹಾಕಾವ್ಯದ ತೊಗಲು ಗೊಂಬೆಯಾಟವನ್ನು ಸಹ ವೀಕ್ಷಿಸಿದ್ದಾರೆ.
ಪ್ರಧಾನಿ ಮೋದಿಯವರು ತೊಗಲು ಗೊಂಬೆಯಾಟವನ್ನು ವೀಕ್ಷಿಸುತ್ತಿರುವ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ರಾಮಾಯಣ ಹಾಗೂ ಶಿವನ ಕಥೆಗಳಿಗೆ ಕುರುಹಾಗಿ ನಿಂತಿರುವ ಲೇಪಾಕ್ಷಿ ರಾಮಾಯಣಕ್ಕೆ ಸಂಬಂಧಿಸಿದ ಪ್ರಾಚೀನ ಗ್ರಾಮವಾಗಿದೆ. ಪುರಾತನ ಗ್ರಂಥಗಳ ಪ್ರಕಾರ, ರಾವಣನಿಂದ ಅಪಹರಿಸ್ಪಟ್ಟ ಸೀತಾ ದೇವಿಯನ್ನು ರಕ್ಷಿಸಲು ಜಟಾಯು ಹೊರಟಾಗ, ರಾವಣನ ಮೋಸದಾಟಕ್ಕೆ ತನ್ನ ರೆಕ್ಕೆಗಳನ್ನು ಕಳೆದುಕೊಂಡು ಹಾರಲು ಕಷ್ಟವಾಗಿ ಜಟಾಯು ಬಿದ್ದಂತಹ ಸ್ಥಳವೇ ಲೇಪಾಕ್ಷಿ ಎಂದು ಹೇಳಲಾಗುತ್ತದೆ.
@BJPIndia ಕೂಡಾ X ನಲ್ಲಿ ಪ್ರಧಾನಿ ಮೋದಿಯವರು ಮಹಾಕಾವ್ಯ ರಾಮಾಯಣದ ತೊಗಲು ಗೊಂಬೆಯಾಟವನ್ನು ವೀಕ್ಷಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿ ರಾಮಾಯಣದ ತೊಗಲು ಗೊಂಬೆಯಾಟವನ್ನು ವೀಕ್ಷಿಸುತ್ತಿರುವ ಕ್ಷಣಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
Prime Minister Shri @narendramodi watched a captivating puppet show showcasing aspects of the Ramayana in Lepakshi, Andhra Pradesh. pic.twitter.com/rQgsl2BDO4
— BJP (@BJP4India) January 17, 2024
ತೊಗಲು ಗೊಂಬೆಯಾಟದ ಹಿನ್ನಲೆ:
ಕರ್ನಾಟಕದ ಶ್ರೀಮಂತ ಕಲೆಗಳಲ್ಲಿ ಗೊಂಬೆಯಾಟವು ಒಂದು. ಈ ಗೊಂಬೆಯಾಟದ ಪ್ರಕಾರಗಳಲ್ಲಿ ತೊಗಲು ಗೊಂಬೆಯಾಟಕ್ಕೆ ವಿಶಿಷ್ಟ ಸ್ಥಾನವಿದೆ. ಇದನ್ನು ನೆರಳು ಗೊಂಬೆಯಾಟವೆಂದೂ ಕರೆಯುತ್ತಾರೆ. ಒಂದು ಕಾಲದಲ್ಲಿ ತೊಗಲು ಗೊಂಬೆಯಾಟ ಸಿನಿಮಾದಷ್ಟೇ ಆಕರ್ಷಣೆ ಹೊಂದಿದ್ದ ಜಾನಪದ ಕಲೆಯಾಗಿತ್ತು. ಆಗಿನ ಕಾಲದಲ್ಲಿ ಗೊಂಬೆಯಾಡಿಸುವ ಗೊಂಬೆರಾಮರು ಸುಗ್ಗಿಯ ಸಮಯದಲ್ಲಿ ಹೆಚ್ಚಾಗಿ ಹಳ್ಳಿಗಳ ಕಡೆಗಳಲ್ಲಿ ಗೊಂಬೆಯಾಟದ ಪ್ರದರ್ಶನವನ್ನು ನೀಡುತ್ತಿದ್ದರು.