ಹೊಸ ದಿಗಂತ ಡಿಜಿಟಲ್ ಡೆಸ್ಕ್ :
ರಾಷ್ಟ್ರಪತಿಗಳ ಭಾಷಣದ ಮೇಲಿನ ರಾಜ್ಯಸಭೆ ಚರ್ಚೆಯಲ್ಲಿ ಗುರುವಾರ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಹಲವು ವಿಷಯಗಳ ಮೇಲೆ ಪ್ರತಿಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದರು. ಈ ಹಂತದಲ್ಲಿ, ರಾಜ್ಯಸಭೆಯಲ್ಲಿ ಬುಧವಾರ ಮಾತನಾಡಿದ್ದ ಖರ್ಗೆಯವರ ಕೆಲವು ಮಾತುಗಳಿಗೂ ಪ್ರಧಾನಿ ಪ್ರತಿಕ್ರಿಯಿಸಿದರು.
ಖರ್ಗೆಯವರು ತಮ್ಮ ಭಾಷಣದ ವೇಳೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಸತ್ತು ಸೇರಿದಂತೆ ಹಲವೆಡೆ ಕಾರ್ಯಭಾರಗಳಿದ್ದರೂ ತಮ್ಮ ಮತಕ್ಷೇತ್ರವಾದ ಕಲಬುರ್ಗಿಗೆ ಬಂದು ಅಧಿಕಾರಿಗಳೊಂದಿಗೆ ಅಷ್ಟೊಂದು ಸಭೆಗಳನ್ನು ನಡೆಸುವ ಅಗತ್ಯವಿತ್ತೇ ಅಂತ ಮಾರ್ಮಿಕವಾಗಿ ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ, “ನಾನು ಕಲಬುರಗಿಗೆ ಭೇಟಿ ನೀಡುತ್ತೇನೆ ಎಂದು ಖರ್ಗೆ ಜಿ ದೂರಿದ್ದಾರೆ. ಅಲ್ಲಿ ನಡೆದಿರುವ ಕೆಲಸವನ್ನು ಅವರು ನೋಡಬೇಕು. ಕಲಬುರಗಿಯಲ್ಲಿ 8 ಲಕ್ಷಕ್ಕೂ ಅಧಿಕ ಖಾತೆಗಳು ಸೇರಿದಂತೆ ಕರ್ನಾಟಕದಲ್ಲಿ 1.70 ಕೋಟಿ ಜನ್ ಧನ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಎಷ್ಟೋ ಜನರು ಅಧಿಕಾರ ಪಡೆಯುತ್ತಿದ್ದಾರೆ. ಆದರೆ ಇನ್ಯಾರಿಗೋ ತಮ್ಮ ಖಾತೆ ಮುಚ್ಚುತ್ತಿದೆ ಎಂದು ನೋವಾಗುತ್ತಿದ್ದರೆ ಅರ್ಥಮಾಡಿಕೊಳ್ಳಬಲ್ಲೆ, ”ಎಂದು ಪ್ರಧಾನಿ ಮೋದಿ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದರು.