ಹೊಸದಿಗಂತ ವರದಿ, ಮೈಸೂರು;
ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಸಂಜೆ ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಡೆಸಿದ ಮತಯಾಚನೆಯ ರೋಡ್ಗೆ ಜನಸಾಗರವೇ ಹರಿದು ಬಂದಿತ್ತು.
ಮಧ್ಯಾಹ್ನ 3 ಗಂಟೆಗೆ ವೇಳೆಗೆ ಮೈಸೂರಿನ ನರಸಿಂಹರಾಜ, ಕೃಷ್ಣರಾಜ, ಚಾಮರಾಜ, ಚಾಮುಂಡೇಶ್ವರಿ, ವರುಣಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಸಾವಿರಾರು ಮಂದಿ ಜನರು ಮೈಸೂರಿಗೆ ಆಗಮಿಸಿದರು. ಸುಡುವ ಬಿಸಿಲನ್ನು ಲೆಕ್ಕಿಸದೆ ವೃತ್ತಗಳಲ್ಲಿ, ರೋಡ್ ಶೋ ಹಾದು ಹೋಗಲಿರುವ ರಸ್ತೆಗಳ ಇಕ್ಕಲೆಗಳಲ್ಲಿ ಗಂಟೆಗಟ್ಟಲೆ ಮೋದಿಯವರನ್ನು ನೋಡಲೆಂದು ಕಾದು ಕುಳಿತ್ತಿದ್ದರು. ಬಿಜೆಪಿ ಕಾರ್ಯಕರ್ತರು, ಪಕ್ಷದ ಭಾವುಗಳನ್ನು ಹಿಡಿದು, ತಲೆಗೆ ಬಿಜೆಪಿ ಟೋಪಿ ಧರಿಸಿ ಮೋದಿಯವರಿಗೆ ಭರ್ಜರಿ ಸ್ವಾಗತವನ್ನು ನೀಡಲು ಕಾಯುತ್ತಿದ್ದರು. ಸಂಜೆ 5.53ರ ವೇಳೆ ಸೇನಾ ಹೆಲಿಕಾಪ್ಟರ್ನಲ್ಲಿ ಮೋದಿಯವರು ಓವಲ್ ಮೈದಾನಕ್ಕೆ ಬಂದಿಳಿದಿರು. ಅವರಿಗೆ ಬಿಜೆಪಿವತಿಯಿಂದ ಮುಖಂಡರು ಆತ್ಮೀಯವಾಗಿ ಸ್ವಾಗತ ನೀಡಿದರು. ಬಳಿಕ ಕೆಲಕಾಲ ಅವರೊಂದಿಗೆ ಮೋದಿಯವರು ಕುಶಲೋಪರಿ ವಿಚಾರಿಸಿದರು. ಬಳಿಕ ಬುಲೇಟ್ ಪ್ರೂಪ್ ಕಾರಿನಲ್ಲಿ ಕುಳಿತು ಚಾಮರಾಜ ಜೋಡಿ ರಸ್ತೆಯ ಮೂಲಕ ರೋಡ್ ಶೋ ಆರಂಭವಾಗಲಿರುವ ಗನ್ ಹೌಸ್ ವೃತ್ತಕ್ಕೆ ಆಗಮಿಸಿದರು. ದಾರಿಯ ಉದ್ದಕ್ಕೂ ರಸ್ತೆಯ ಇಕ್ಕಲೆಗಳಲ್ಲಿ ನಿಂತಿದ್ದ ಜನರತ್ತ ಮೋದಿ ಕೈ ಬೀಸಿ ಮುಗಳು ನಗೆ ಬೀರುತ್ತಾ ಸಾಗಿದರು.
ಮೋದಿಯವರ ತಮ್ಮ ಬಳಿ ಬರುತ್ತಿದ್ದಂತೆ ನೆರೆದಿದ್ದ ಜನರು ಮೋದಿ, ಮೋದಿ ಎಂದು ಘೋಷಣೆಗಳನ್ನು ಕೂಗಿ ಜಯಕಾರ ಹಾಕಿದರು. ಪುಷ್ಪಗಳ ಸುರಿಮಳೆಗೈದರು. ಎಲ್ಲಾ ವೃತ್ತಗಳಲ್ಲಿ ಜನರು ಕಿಕ್ಕಿರಿದು ತುಂಬಿ ತುಳುಕುತ್ತಿದ್ದರು. ದಸರಾದ ಜಂಬೂಸವಾರಿಯಲ್ಲಿ ಭರ್ಜರಿ ಜನ ಸ್ತೋಮ ನೆರೆಯುತ್ತಿದ್ದಂತೆ ಮೋದಿಯವರ ರೋಡ್ಶೋಗೆ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು.
ಕೇಸರಿ ಮಯವಾದ ರಾಜ ಮಾರ್ಗ; ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಹಿನ್ನಲೆಯಲ್ಲಿ ಮೈಸೂರಿನ ಅರ್ಧಭಾಗವೇ ಕೇಸರಿಮಯವಾಗಿ ಪರಿವರ್ತನೆಯಾಗಿತ್ತು. ಎಲ್ಲೆಲ್ಲೂ ಬಿಜೆಪಿಯ ಭಾವುಟಗಳು ಹಾರಾಡುತ್ತಿದ್ದವು. ಮಾರ್ಗದ ಉದ್ದಕ್ಕೂ ಹಾಗೂ ಆಯಾ ವೃತ್ತಗಳಲ್ಲಿ ಮೋದಿಯವರ ಕಟೌಟ್ಗಳನ್ನು ಹಾಕಲಾಗಿತ್ತು. ರಸ್ತೆಯ ಇಕ್ಕಲೆಗಳಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ಗಳಿಗೆ ಕೇಸರಿ ಬಟ್ಟೆಯನ್ನು ಉದ್ದಕ್ಕೂ ಹಾಕಲಾಗಿತ್ತು.