ಹೊಸ ದಿಗಂತ ವರದಿ, ಗದಗ:
ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆಯ ಸಂದರ್ಭದಲ್ಲಿ ಮಂಗಳವಾರ ಮಂಡಿಸಿರುವ 2022-23 ನೇ ಸಾಲಿನ ಕೇಂದ್ರ ಸರ್ಕಾರದ ಮುಂಗಡ ಪತ್ರವು ಬರಲಿರುವ ಮುಂದಿನ 25 ವರ್ಷಗಳ ಅಭಿವೃದ್ಧಿಯ ನೀಲನಕ್ಷೆಯ ಸರ್ವ ಕ್ಷೇತ್ರಗಳ ಅಭಿವೃದ್ಧಿಯ ಗುರಿಯೊಂದಿಗೆ ಮಂಡಿಸಿದ ಮುಂಗಡ ಪತ್ರವಾಗಿದೆ ಹಾಗೂ ಬರಲಿರುವ ಸ್ವಾತಂತ್ರ ಮಹೋತ್ಸವದ ಶತಮಾನೋತ್ಸವದ ಸಂದರ್ಭ ಭಾರತವನ್ನು ಮಾಹಿತಿ ತಂತ್ರಜ್ಞಾನ, ದೂರ ಸಂಪರ್ಕ, ಉತ್ಪಾದಕತೆ, ಹಣಕಾಸು ಹೂಡಿಕೆ ಸೇರಿದಂತೆ ಸದೃಢ, ಆರ್ಥಿಕತೆಯ ಸರ್ವ ಸಶಕ್ತ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ ಮುಂಗಡ ಪತ್ರ ಎಂದು ಸಂಸದ ಶಿವಕುಮಾರ ಉದಾಸಿ ಅವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕೃಷಿ, ಶಿಕ್ಷಣ, ಆರೋಗ್ಯ, ಉದ್ಯೋಗ ಸೃಷ್ಠಿ, ಮೂಲಸೌಕರ್ಯ ಅಭಿವೃದ್ಧಿ, ಸೇರಿದಂತೆ ಸರ್ವ ರಂಗಗಳ ಉತ್ತೇಜನಕಾರಿ ಯೋಜನೆಗಳ್ನು ರೂಪಿಸುವ ಮೂಲಕ ಪ್ರಸಕ್ತ ಇರುವ ಜಿಎಸ್ಟಿಯ ತೆರಿಗೆ ಸಂಗ್ರಹದ ಹೆಚ್ಚಳದ ಗುರಿಯೊಂದಿಗೆ ದೇಶದ ಐದು ನದಿಗಳ ಜೋಡಣೆ, ಸಣ್ಣ ಉದ್ದಿಮೆಗಳಿಗೆ ತುರ್ತುಸಾಲ, ವಿದ್ಯುತ್ ಚಾಲಿತ ವಾಹನ ಉದ್ಯಮಕ್ಕೆ ಉತ್ತೇಜನ ಕೊಡುವ ದೃಷ್ಠಿಯಿಂದ ಬ್ಯಾಟರಿ ಇಂಧನ ಅಭಿವೃದ್ಧಿಗೆ ಒತ್ತು ನೀಡುವದರೊಂದಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ೫ ಜಿ ತರಂಗಾಂತರ ಹರಾಜು ಮಾಡುವದು ಘೋಷಿಸಿರುವದು ಅತ್ಯಂತ ಶ್ಲ್ಯಾಘನೀಯವಾಗಿದೆ.
ದೇಶವು ಮಾಹಿತಿ ತಂತ್ರಜ್ಞಾನ, ದೂರ ಸಂಪರ್ಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲಿದೆ ಹಾಗೂ ರಕ್ಷಣಾ ವಲಯಕ್ಕೆ ಆದ್ಯತೆ ಯುವ ಸಬಲೀಕರಣ, ಸ್ಟಾರ್ಟ್ ಅಫ್ ಯೋಜನೆಗೆ ಸಾಕಷ್ಟು ಪ್ರೋತ್ಸಾಹದಾಯಕ ಯೋಜನೆಗಳನ್ನು ತಲುಪಿಸುವದರೊಂದಿಗೆ ಮೂಲಭೂತ ಸೌಕರ್ಯಗಳ ವೃದ್ಧಿಗೆ ಆದ್ಯತೆ ಹಾಗೂ ಎರಡು ಲಕ್ಷ ಅಂಗನವಾಡಿಗಳ ಉನ್ನತೀಕರಣ ಸೇರಿದಂತೆ ಮಹಿಳಾ ಸಬಲೀಕರಣಕ್ಕೆ ಸಕ್ಷಮ ಅಂಗನವಾಡಿ ಯೋಜನೆ ಜಾರಿ ಮಾಡುವ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಒಟ್ಟಾರೆ ಈ ಮುಂಗಡ ಪತ್ರವು ರಾಷ್ಟ್ರಕ್ಕೆ ಆರ್ಥಿಕ ಭದ್ರಬುನಾದಿ ಹಾಕುವ ದೂರದೃಷ್ಟಿಯ ಮುಂಗಡ ಪತ್ರವಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಅವರು ತಿಳಿಸಿದ್ದಾರೆ.