ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ವಿಮಾನಯಾನ ವಲಯದಲ್ಲಿ ಆತಂಕ ಮೂಡಿಸುವ ಘಟನೆಗಳು ಸರಣಿಯಾಗಿ ವರದಿಯಾಗುತ್ತಿದ್ದು, ಇದರ ಬೆನ್ನಲ್ಲೇ, ಚತ್ತೀಸಗಢದ ಕಾಡು ಪ್ರದೇಶದಲ್ಲಿ ಖಾಸಗಿ ವಿಮಾನ ಪತನಗೊಂಡಿರುವುದು ಭೀತಿ ಹುಟ್ಟಿಸಿದೆ.
ಜಶಪುರ ಮತ್ತು ನಾರಾಯಣಪುರ ವ್ಯಾಪ್ತಿಯ ರತ್ನಪಹಲಿ ಅರಣ್ಯ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯಂತೆ, ವಿಮಾನ ಅತೀ ಕಡಿಮೆ ಎತ್ತರದಲ್ಲಿ ಹಾರಾಡುತ್ತಿದ್ದ ವೇಳೆ ಪರ್ವತ ಪ್ರದೇಶದ ಮರಗಳಿಗೆ ಡಿಕ್ಕಿ ಹೊಡೆದು ನೆಲಕ್ಕುರುಳಿದೆ ಎಂದು ತಿಳಿದುಬಂದಿದೆ. ತಾಂತ್ರಿಕ ದೋಷದ ಸುಳಿವು ಸದ್ಯಕ್ಕೆ ಲಭ್ಯವಾಗಿಲ್ಲವೆಂದು ಮೂಲಗಳು ಹೇಳಿವೆ.
ಇದನ್ನೂ ಓದಿ:
ಪತನಗೊಂಡ ಬಳಿಕ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದೂರದಿಂದಲೂ ಜ್ವಾಲೆಗಳು ಗೋಚರವಾಗಿವೆ. ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಿಕರು ಹಾಗೂ ಸಿಬ್ಬಂದಿ ಇದ್ದರು ಎಂಬ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ. ಕೆಲವರು ಸಾವನ್ನಪ್ಪಿರುವ ಸಾಧ್ಯತೆ ವ್ಯಕ್ತವಾಗಿದ್ದರೂ ಅಧಿಕೃತ ದೃಢೀಕರಣ ಸಿಕ್ಕಿಲ್ಲ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸ್ ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಆದರೆ ದಟ್ಟ ಅರಣ್ಯ ಪ್ರದೇಶವಾಗಿರುವುದರಿಂದ ಕಾರ್ಯಾಚರಣೆಗೆ ತೊಂದರೆ ಎದುರಾಗುತ್ತಿದೆ. ಸ್ಥಳೀಯ ಆಡಳಿತ ಘಟನಾ ಸ್ಥಳವನ್ನು ವಲಯಗೊಳಿಸಿ ಪರಿಶೀಲನೆ ನಡೆಸುತ್ತಿದೆ. ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.



