ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಪ್ರಾಧ್ಯಾಪಕ ಟಿ.ಜೆ. ಜೋಸೆಫ್ ಎಂಬವರ ಕೈಕಡಿದ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಕಾಸರಗೋಡಿಗೆ ಭೇಟಿ ನೀಡಿರುವ ಎನ್ ಐಎ ಅಧಿಕಾರಿಗಳು ತನಿಖೆ ಇನ್ನಷ್ಟು ಚುರುಕುಗೊಳಿಸಿದ್ದು, ಪ್ರಕರಣದ ಪ್ರಮುಖ ಆರೋಪಿ, ಎರ್ನಾಕುಳಂ ಪೆರುಂಬಾವೂರು ಅಶವನ್ನೂರ್ ಮಟ್ಟಾಶ್ಯೇರಿ ನಿವಾಸಿ ಸವಾದ್ನ ಕುರಿತು ಇನ್ನಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಈಗಾಗಲೇ ಈತನಿಂದ ಎರಡು ಮೊಬೈಲ್, ಸಿಮ್ಕಾರ್ಡ್ ಸೇರಿದಂತೆ ವಿವಿಧ ದಾಖಲೆಪತ್ರಗಳನ್ನು ಎನ್ಐಎ ವಶಪಡಿಸಿಕೊಂಡಿದೆ. ಇದರ ಬೆನ್ನಿಗೇ ಆರೋಪಿಯ ಗುರುತು ಪತ್ತೆಹಚ್ಚುವ ಪೆರೇಡ್ ನಡೆಸಲು ಅನುಮತಿ ಕೋರಿ ಎನ್ಐಎ ಕೊಚ್ಚಿಯ ವಿಶೇಷ ನ್ಯಾಯಾಲಯಕ್ಕೆ ಮನವಿಯನ್ನೂ ಮಾಡಿದೆ.
ಆರೋಪಿ ಸವಾದ್ ಎಂಟು ವರ್ಷದ ಹಿಂದೆ ನಕಲಿ ಹೆಸರು, ವಿಳಾಸ ನೀಡಿ ಮಂಜೇಶ್ವರದ ಯುವತಿಯನ್ನು ವಿವಾಹಿತನಾಗಿದ್ದು, ಇಬ್ಬರು ಮಕ್ಕಳನ್ನೂ ಹೊಂದಿದ್ದಾನೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಈತನ ಪತ್ನಿ ಹಾಗೂ ಮನೆಯವರಿಂದಲೂ ಹೇಳಿಕೆ ದಾಖಲಿಸಿಕೊಳ್ಳುವ ಸಾಧ್ಯತೆಗಳಿವೆ.
ಈ ಹಿಂದೆ ೨೦೧೦ರಲ್ಲಿ ಈ ಪ್ರಕರಣ ನಡೆದಿತ್ತು. ಕೃತ್ಯ ನಡೆಸಿದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ, ತನ್ನ ಹೆಸರನ್ನು ಶಾಜಹಾನ್ ಎಂದು ಬದಲಾಯಿಸಿಕೊಂಡು ವಿವಿಧೆಡೆ ಕೆಲಸ ನಿರ್ವಹಿಸುತ್ತಿದ್ದ. ಈತನನ್ನು ಭಾರೀ ಸಾಹಸದಿಂದ ಎನ್ಐಎ ಬಲೆಗೆ ಕೆಡಹುವಲ್ಲಿ ಯಶಸ್ವಿಯಾಗಿದೆ.