ಹೊಸ ದಿಗಂತ ವರದಿ,ಹಾವೇರಿ:
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಳೆದ ಕೆಲ ದಿನಗಳಿಂದ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ಉತ್ತಮ ಪ್ರಚಾರ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬುಧವಾರ ಸಮ್ಮೇಳನ ಜರಗುವ ಮುಖ್ಯ ವೇದಿಕೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದಲ್ಲದೆ ಬೆಂಗಳೂರಿನಿಂದ ಹೊರಡುವ ಪ್ರತಿಯೊಂದು ವಿಮಾನದಲ್ಲಿ ಕನ್ನಡದಲ್ಲಿನೇ ಘೋಷಣೆ (ಅನೌನ್ಸ್) ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಕನ್ನಡ ನಾಡಿನಾದ್ಯಂತ ಸಂಚರಿಸಿ ಗುರುವಾರ ಬೆಳಿಗ್ಗೆ ೯ ಘಂಟೆಗೆ ಭುವನೇಶ್ವರಿ ರಥವು ಹಾವೇರಿ ನಗರಕ್ಕೆ ಬರಲಿದೆ ಎಂದರು.
ಸಮ್ಮೇಳನದಲ್ಲಿ ಫೀಲ್ಡ ಮಾರ್ಷಲ್ ಕಾರ್ಯಪ್ಪನವರ ಮಗ ಏರ್ ಮಾರ್ಷಲ್ ಕಾರ್ಯಪ್ಪ ಹಾಗೂ ಜರ್ಮನಿಯಿಂದ ಕಿಟಲ್ ಅವರ ಮರಿ ಮೊಮ್ಮಗ ಆಗಮಿಸಲಿದ್ದಾರೆ ಅವರಲ್ಲದೆ ಚಿತ್ರ ನಟ ರಮೇಶ ಅರವಿಂದ, ಕೆಂಪೇಗೌಡ ವಿಮಾನ ನಿಲ್ದಾಣದ ಸಿಇಓ ಅವರು ಆಗಮಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿ.ಪಂ ಸಿಇಓ ಮಹಮ್ಮದ ರೋಷನ್, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಕಸಾಪ ತಾಲೂಕಾಧ್ಯಕ್ಷ ವಾಯ್.ಬಿ.ಆಲದಕಟ್ಟಿ ಇತರರಿದ್ದರು.