ಹೊಸದಿಗಂತ ಡಿಜಿಟಲ್ ಡೆಸ್ಕ್ :
ಆಂಧ್ರಪ್ರದೇಶದಲ್ಲಿ 3000 ಹೆಚ್ಚುವರಿ ದೇವಸ್ಥಾನಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ನಿರ್ದೇಶನದ ಮೇರೆಗೆ, ದೇಗುಲ ಕಟ್ಟುವ ಯೋಜನೆಯನ್ನು ದೊಡ್ಡಮಟ್ಟದಲ್ಲಿ ಸರ್ಕಾರ ಕೈಗೆತ್ತಿಕೊಂಡಿದೆ ಎಂದು ರಾಜ್ಯ ದತ್ತಿ ಇಲಾಖೆ ಸಚಿವ, ಉಪಮುಖ್ಯಮಂತ್ರಿ ಕೊಟ್ಟು ಸತ್ಯನಾರಾಯಣ ಹೇಳಿದ್ದಾರೆ.
ಆಂಧ್ರಪ್ರದೇಶದ ಪ್ರತಿ ಜಿಲ್ಲೆ, ಹಳ್ಳಿಯಲ್ಲೂ ದೇಗುಲ ಇರಬೇಕು ಎಂಬುದು ನಮ್ಮ ಉದ್ದೇಶ ಎಂದೂ ಅವರು ಹೇಳಿಕೊಂಡಿದ್ದು, ಈ ಮೂಲಕ ಹಿಂದು ಧಾರ್ಮಿಕ ನಂಬಿಕೆಗಳನ್ನು ರಕ್ಷಿಸಲು ಮತ್ತು ಹೆಚ್ಚೆಚ್ಚು ಪಸರಿಸಲು ಮುಂದಾಗಿದೆ.
ಸದ್ಯ 1330 ದೇವಸ್ಥಾನಗಳ ನಿರ್ಮಾಣದ ಜತೆಗೆ, ಇನ್ನೂ 1465 ದೇವಸ್ಥಾನಗಳನ್ನು ಸೇರಿಸಲಾಗಿದೆ. ಕೆಲವು ಜನಪ್ರತಿನಿಧಿಗಳ ಒತ್ತಾಸೆ ಮೇರೆಗೆ 200 ಹೆಚ್ಚುವರಿ ದೇಗುಲಗಳು ನಿರ್ಮಾಣವಾಗಲಿವೆ.
ತಿರುಪತಿ ತಿರುಮಲ ದೇವಸ್ಥಾನಂನ ಶ್ರೀ ವಾಣಿ ಟ್ರಸ್ಟ್ ಪ್ರತಿ ದೇಗುಲಕ್ಕೂ ಹಣಕಾಸು ದೇಣಿಗೆ ನೀಡಲಿದೆ. ಇನ್ನುಳಿದ ಕೆಲವು ಸ್ವಯಂಸೇವಕ ಸಂಸ್ಥೆಗಳು, ಸಹಕಾರ ಸಂಘಗಳು ಕೂಡ ದೇಗುಲ ನಿರ್ಮಾಣಕ್ಕೆ ಸಹಾಯ ಮಾಡಲಿವೆ ಎಂದು ಸತ್ಯನಾರಾಯಣ ಹೇಳಿದ್ದಾರೆ.
ದತ್ತಿ ಇಲಾಖೆಯ ಅಧೀನದಲ್ಲಿರುವ 978 ದೇವಸ್ಥಾನಗಳ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಪ್ರತಿ 25 ದೇವಸ್ಥಾನಗಳ ಉಸ್ತುವಾರಿಯನ್ನು ಒಬ್ಬ ಸಹಾಯಕ ಇಂಜಿನಿಯರ್ಗೆ ವಹಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಹಾಗೇ, ಹಣ ಹಂಚಿಕೆ ಬಗ್ಗೆಯೂ ಮಾಹಿತಿ ನೀಡಿದ್ದಾರೆ.