ಸತೀಶ ಜಾರಕಿಹೊಳಿ ಹೇಳಿಕೆ ಖಂಡಿಸಿ, ಯತ್ನಾಳ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಹೊಸದಿಗಂತ ವರದಿ ವಿಜಯಪುರ:

ಹಿಂದೂ ಅಶ್ಲೀಲ ಪದ ಎಂದು ಹೇಳಿದ ಶಾಸಕ ಸತೀಶ ಜಾರಕಿಹೊಳಿ ಹೇಳಿಕೆ ಖಂಡಿಸಿ, ಶಾಸಕ ಯತ್ನಾಳ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಗಾಂಧಿಚೌಕ್ ವರೆಗೂ ಪ್ರತಿಭಟನೆ ನಡೆಸಿ, ಶಾಸಕ ಸತೀಶ ಜಾರಕಿಹೊಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಹಿಂದೂ ಬಗ್ಗೆ ಅತ್ಯಂತ ಅಶ್ಲೀಲವಾಗಿ ಶಾಸಕ ಸತೀಶ ಜಾರಕಿಹೊಳಿ ಮಾತನಾಡಿದ್ದಾರೆ. ಸಾವಿರಾರು ವರ್ಷದ ಸನಾತನ ಧರ್ಮ ಹಿಂದೂ ಧರ್ಮ ಆಗಿದೆ.‌ ಶಾಸಕ ಜಾರಕಿಹೊಳಿ ಬಾಯಿ ಮುಚ್ಕೊಂಡು ಸುಮ್ಮನೆ ಇರಬೇಕು ಎಂದು ಎಚ್ಚರಿಸಿದರು. ಸತೀಶ ಜಾರಕಿಹೊಳಿಗೆ ನಾಚಿಕೆ ಆಗ್ಬೇಕು.‌ ಯಾರೋ ಬರೆದಿದ್ದು, ಹೇಳಿದ್ದು ಖಂಡನೀಯ. ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಶಾಸಕ ಜಾರಕಿಹೊಳಿಯನ್ನು ತಕ್ಷಣವೇ ಕಾಂಗ್ರೆಸ್‌ನಿಂದ ಉಚ್ಛಾಟನೆ ಮಾಡಬೇಕು ಎಂದು ಆಗ್ರಹಿಸಿದರು.

ಅಲ್ಲದೇ, ಜಾರಕಿಹೊಳಿ ದೊಡ್ಡ ಸಿದ್ಧಾಂತ ಶಿಕಾಮಣಿನಾ ? ಸುಮ್ಮನೆ ಬಾಯಿ ಮುಚ್ಕೊಂಡು ಕುಳಿತುಕೊಂಡರೆ ಚೆಲೋ. ಬರುವ 13 ಕ್ಕೆ ಗೋಕಾಕಕ್ಕೆ ಹೋಗುತ್ತಿದ್ದೇನೆ. ಬರೋಬ್ಬರಿ ಉತ್ತರ ನೀಡ್ತೇನೆ ಎಂದರು. ಪಂಚಮಸಾಲಿ, ಹಿಂದೂ ಬಗ್ಗೆ ಸತೀಶ ಜಾರಕಿಹೊಳಿ ಮಾತನಾಡಿದ್ದಾರೆ. ಚುನಾವಣೆಯಲ್ಲಿ‌ ನಿಜವಾದ ಹಿಂದೂ ಧರ್ಮದವರು ಏನು ಅನ್ನೊದು ತೋರಿಸುತ್ತಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!