ಹೊಸದಿಗಂತ ವರದಿ,ಮಂಡ್ಯ:
ಹಾಸನದ ಪೆನ್ಡ್ರೈವ್ ಪ್ರಕರಣ ನಡೆಯಲು ಯಾರ ಕುಟುಂಬ ಕಾರಣ, ಪ್ರಕರಣವನ್ನು ಡೈವರ್ಟ್ ಮಾಡಲು ಪ್ರತಿಭಟನೆ ಮಾಡುತ್ತಿದ್ದಾರಾ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಜೆಡಿಎಸ್ ವಿರುದ್ಧ ಕಿಡಿಕಾರಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಯಾವ ಸಾಧನೆಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ, ನಮ್ಮ ಹುಡುಗ ಮಾಡಿದ್ದು ಸರಿ ಎನ್ನುವ ಸಂತೋಷಕ್ಕಾ ಎಂದು ಪ್ರಶ್ನಿಸಿದರಲ್ಲದೆ, ಸಂಕಷ್ಟಕ್ಕೆ ಒಳಗಾದವರು ಪಕ್ಕದ ಮನೆ ಮದುವೆಗೆ ಹೋಗುವುದಕ್ಕೆ ಆಗುತ್ತಿಲ್ಲ. ಕುಟುಂಬದವರು ಒಟ್ಟಿಗೆ ಕುಳಿತು ಊಟ ಮಾಡಲೂ ಆಗುತ್ತಿಲ್ಲ. ಈ ಸಾಧನೆಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆಯೇ ಎಂದು ಛೇಡಿಸಿದರು.
ನಿತ್ಯ ಹಾದಿ ರಂಪ ಮಾಡುವುದು ಸರಿಯಲ್ಲ
ಮಾಜಿ ಮುಖ್ಯಮಂತ್ರಿ ಆದವರು ದಿನ ನಿತ್ಯ ಇದನ್ನೇ ಬೀದಿ ರಂಪ, ಹಾದಿ ರಂಪ ಮಾಡಿಕೊಂಡು ಕುಳಿತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅವರೇ ಆಲೋಚನೆ ಮಾಡಬೇಕು. ಆ ವಿಚಾರ ಮಾತನಾಡಲು ನಮಗೆ ಮುಜುಗರವಾಗುತ್ತದೆ ಎಂದು ಅಸಹನೆ ವ್ಯಕ್ತಪಡಿಸಿದರು.
ಸಾಮಾನ್ಯರು ಅಪರಾಧ ಮಾಡಿದರೆ ಅವರ ಅಪ್ಪನ್ನೋ, ಅಣ್ಣನನ್ನೋ ಠಾಣೆಗೆ ಕರೆತಂದು ಕೂರಿಸುತ್ತಾರೆ. ಇವರು ಜವಾಬ್ದಾರಿ ತೆಗೆದುಕೊಂಡು ಪ್ರಜ್ವಲ್ನನ್ನು ಕರೆಸಬೇಕಿತ್ತು ಎಂದು ಹೇಳಿದರು.