ಹೊಸದಿಗಂತ ಡಿಜಿಟಲ್ ಡೆಸ್ಕ್:
ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ಸಂಪುಟದಿಂದ ವಜಾ ಮಾಡಿದ್ದನ್ನು ಪ್ರಶ್ನಿಸಿ ಇಸ್ರೇಲ್ನ ರಾಜಧಾನಿ ಟೆಲ್ ಅವೀವ್ನಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಜೆರುಸಲೆಮ್ನಲ್ಲಿರುವ ನೆತನ್ಯಾಹು ಅವರ ನಿವಾಸದ ಮುಂದೆ ಬಿಗಿ ಭದ್ರತೆ ಏರ್ಪಡಿಸಿದ್ದಾರೆ.
ಶ್ವೇತಭವನವು ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರ ವಜಾಗೊಳಿಸುವಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, “ತುರ್ತು ರಾಜಿಯ ಅಗತ್ಯವಿದೆ” ಎಂದು ಒತ್ತಿಹೇಳಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳನ್ನು ವ್ಯಾಪಕವಾದ ಜನಪ್ರಿಯ ಬೆಂಬಲದೊಂದಿಗೆ ಅನುಸರಿಸಬೇಕು. ಸಾಧ್ಯವಾದಷ್ಟು ಬೇಗ ರಾಜಿ ಮಾಡಿಕೊಳ್ಳಲು ನಾವು ಇಸ್ರೇಲಿ ನಾಯಕರನ್ನು ಬಲವಾಗಿ ಒತ್ತಾಯಿಸುತ್ತೇವೆ. ಇಸ್ರೇಲ್ನ ಭದ್ರತೆ ಮತ್ತು ಪ್ರಜಾಪ್ರಭುತ್ವಕ್ಕೆ ಯುಎಸ್ ಬೆಂಬಲ ಕಬ್ಬಿಣದ ಕಡಲೆಯಾಗಿ ಉಳಿದಿದೆ ಎಂದು ತಿಳಿಸಿದೆ.
ನ್ಯಾಯ ವ್ಯವಸ್ಥೆಯನ್ನು ಬದಲಾಯಿಸುವ ನೆತನ್ಯಾಹು ಅವರ ಪ್ರಸ್ತಾಪದ ವಿರುದ್ಧ ರಕ್ಷಣಾ ಸಚಿವರು ಮಾತನಾಡಿದರ ಪರಿಣಾಮವಾಗಿ ಅವರನ್ನು ಪ್ರಧಾನಿ ಸಂಪುಟದಿಂದ ಕೈಬಿಡಲಾಯಿತು. ಜೆರುಸಲೇಂನಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರು ಮತ್ತು ಸೈನಿಕರು ಪ್ರತಿಭಟನಾಕಾರರನ್ನು ಜಲ ಫಿರಂಗಿಗಳೊಂದಿಗೆ ಚದುರಿಸಿದರು. ಇಸ್ರೇಲಿ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿ ಕೈಗೊಳ್ಳಲು ಬಯಸುವ ಸುಧಾರಣೆಗಳನ್ನು ನಿಲ್ಲಿಸಲು ಕರೆ ನೀಡಿದ್ದಾರೆ. ಹೊಸ ಕಾನೂನುಗಳ ಪರಿಷ್ಕರಣೆಗಳ ಪ್ರಕಾರ, ನ್ಯಾಯಾಧೀಶರ ನೇಮಕಾತಿ ಸಂಪೂರ್ಣವಾಗಿ ಸರ್ಕಾರದ ನಿಯಂತ್ರಣದಲ್ಲಿದೆ. ಹೊಸ ಕಾನೂನಿನ ವಿರುದ್ಧ ಈಗಾಗಲೇ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿವೆ.
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ನೆತನ್ಯಾಹು ಕಾನೂನುಗಳನ್ನು ಬದಲಿಸಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಹೊಸ ಕಾಯಿದೆ ವಿರುದ್ಧ ಜನ ಪ್ರತಿಭಟನೆ ನಡೆಸುತ್ತಿದ್ದಾರೆ.