ಹೊಸದಿಗಂತ ವರದಿ ಮಂಗಳೂರು:
ಪ್ರಧಾನಿ ನರೇಂದ್ರ ಮೋದಿ ಅವರ ಮಂಗಳೂರು ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಅಂತಿಮ ಹಂತದ ತಯಾರಿ ಪೂರ್ಣಗೊಂಡಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ತಿಳಿಸಿದರು. ಪ್ರಧಾನಿ ಸಮಾವೇಶ ನಡೆಯುವ ಕೂಳೂರಿನ ಸ್ಥಳದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಭದ್ರತೆ ದೃಷ್ಟಿಯಿಂದ ಶುಕ್ರವಾರ ಬೆಳಗ್ಗೆ 11.30ರೊಳಗೆ ಜನರು ಕೂಳೂರಿನ ಗೋಲ್ಡ್ಫಿಂಚ್ ಸಿಟಿ ಮೈದಾನಕ್ಕೆ ಆಗಮಿಸಬೇಕು ಎಂದರು.
ಸೆ.2ರಂದು ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶಕ್ಕೆ ಒಂದು ಲಕ್ಷಕ್ಕೂ ಅಧಿಕ ಮಂದಿ ಆಗಮಿಸುವರು. ನಿರೀಕ್ಷೆಗೂ ಮೀರಿ ಜನರು ಸೇರುವ ಸಾಧ್ಯತೆ ಇದೆ. ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ನಡೆಸಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವರು. ಇದಕ್ಕಾಗಿ ಎರಡು ಸಾವಿರ ಬಸ್ ಬುಕ್ಕಿಂಗ್ ಮಾಡಲಾಗಿದೆ ಎಂದರು.
ಪ್ರಧಾನಿ ಸಮಾವೇಶ ದ.ಕ. ಉಡುಪಿಯ ಅಭಿವೃದ್ಧಿ ದೃಷ್ಟಿಯಿಂದ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ. ರಾಜಕಾರಣ ದೃಷ್ಟಿಯಿಂದಲೂ ನಮ್ಮೆಲ್ಲರಿಗೂ ಸಮಾವೇಶ ಹೊಸ ಉತ್ಸಾಹ ತುಂಬಲಿದೆ ಎಂದರು.