ಹೊಸದಿಗಂತ ವರದಿ, ಕಲಬುರಗಿ:
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಮಾಡಿರುವ ತಪ್ಪಿತಸ್ಥ ಯಾರೇ ಇರಲಿ ಅವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಅವರು ಶುಕ್ರವಾರ ನಗರದ ಐವನ್ ಇ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಿಎಸ್ಐ ಪರೀಕ್ಷಾ ಅಕ್ರಮಕ್ಕೆ ಕಾರಣ ಯಾರು ?.ಯಾಕೇ ಈ ರೀತಿ ಅಕ್ರಮವಾಯಿತು ?. ಎಂದು ಗೊತ್ತಾಗಬೇಕು ಎಂದರು.
ಕಲಬುರಗಿ ಜಿಲ್ಲೆಯಲ್ಲಿ ಸಾಕಷ್ಟು ಸರಕಾರಿ ಕಾಲೇಜುಗಳು,ಪೋಲಿಸ್ ತರಭೇತಿ ಕೇಂದ್ರ ಇದ್ದರೂ, ಕೆಲವು ಖಾಸಗಿ ಶಾಲೆಗಳಿಗೆ ಹೇಗೆ ಪರೀಕ್ಷಾ ಕೇಂದ್ರ ಮಾಡಿ ಕೊಡಲಾಯಿತು ಎಂದು ಪ್ರಶ್ನೆ ಮಾಡಿದರು.
ಇಷ್ಟೆಲ್ಲಾ ಇದ್ದರೂ, ಯೋವದೋ ಸಣ್ಣ ಸಣ್ಣ ಖಾಸಗಿ ಶಾಲೆಗಳಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ ನಡೆಸುವುದು ಏಕೆ ಎಂದು ಕೇಳಿದರು. ಈ ಬಗ್ಗೆ ಯಾವ ರೀತಿ ತನಿಖೆ ಮಾಡುತ್ತಿರಾ ಮಾಡಿ, ಆದರೆ ಪ್ರಾಮಾಣಿಕ ತನಿಖೆ ಆಗಬೇಕೆಂದು ಆಗ್ರಹಿಸಿದರು.
ಈ ಪ್ರಕರಣದಲ್ಲಿ ತಪ್ಪಿತಸ್ಥ ಯಾರೇ ಆಗಿದ್ದರೂ ಅವರಿಗೆ ಶಿಕ್ಷೆ ಆಗಬೇಕು. ಜೊತೆಗೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿ ಗಳಿಗೆ ಹೇಗೆ ಸಹಾಯ ಮಾಡಬಹುದೋ ಮಾಡಿ ಎಂದು ಸಲಹೆ ನೀಡಿದರು.
ಹುಬ್ಬಳ್ಳಿ ಗಲಭೆಕೋರರ ಕುಟುಂಬಕ್ಕೆ ಜಮೀರ್ ನೆರವು ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದ ಅವರು, ನೀವು ಕರೆದಿದ್ದೂ ಬೇರೆ ವಿಷಯ ಕೇಳುವುದಕ್ಕೆ. ಆದರೆ ಕೇಳುತ್ತಿರುವುದು ಬೇರೆ ಅಂದರೆ ಹೇಗೆ ರೀ ಎಂದು ಹೇಳಿದ ಅವರು, ಎಲ್ಲಾ ವಿಚಾರಗಳನ್ನು ಗೊತ್ತಿರಲು ನಾನೆನೂ ಸವ೯ಜ್ಞಾನಾ ? ಎಂದು ಉತ್ತರ ನೀಡುವ ಮೂಲಕ ಕಾಲ್ಗಿತ್ತರು.