ಹೊಸ ದಿಗಂತ ವರದಿ ಕಲಬುರಗಿ:
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ರೂವಾರಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮತ್ತು ಟೀಂ ಕಡೆಗೂ ಸಿಐಡಿ ಬಲೆಗೆ ಬಿದ್ದಿದ್ದಾಳೆ.
ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ 5 ಜನರನ್ನು ಬಂಧಿಸಿ ಕಲಬುರ್ಗಿಗೆ ಕರೆತರಲಾಗುತ್ತಿದೆ.
ಪುಣೆಯಲ್ಲಿ ದಿವ್ಯಾ ಅಂಡ್ ಟೀಮ್ ಇದೆ ಅನ್ನುವುದನ್ನು ಪತ್ತೆ ಹಚ್ಚಿದ ಸಿಐಡಿ ತಂಡ, ಕಾರ್ಯಾಚರಣೆ ನಡೆಸಿ ದಿವ್ಯಾ ಮತ್ತು ಮೇಲ್ವಿಚಾರಕಿ ಅರ್ಚನಾ ಸೇರಿ ಐವರನ್ನು ಅರೆಸ್ಟ್ ಮಾಡಿದ್ದಾರೆ.
ಸದ್ಯ ಕಲಬುರ್ಗಿಗೆ ಕರೆತರಲಾಗುತ್ತಿದ್ದು, ಇಂದು ಬೆಳಗ್ಗೆ 10 ಗಂಟೆಗೆ ಕಲಬುರ್ಗಿ ಸಿಐಡಿ ಕಚೇರಿಗೆ ತಲುಪಲಿದ್ದಾರೆ..
ಜ್ಞಾನಜ್ಯೋತಿ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿಯಾದ ಬಿಜೆಪಿ ಜಿಲ್ಲಾ ನಾಯಕಿ ದಿವ್ಯಾ ಹಾಗರಗಿ ಹಾಗೂ ಟೀಂ ಪಿಎಸ್ಐ ಅಕ್ರಮ ಹೊರಬಿಳುತ್ತಿದ್ದಂತೆ ತಲೆಮರೆಸಿಕೊಂಡಿದ್ದರು. ಸಿಐಡಿ ಸಾಕಷ್ಟು ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿರಲಿಲ್ಲ, ಬಂಧನ ಕ್ಕಾಗಿಯೇ ವಿಶೇಷ ತಂಡಗಳನ್ನು ರಚಿಸಲಾಗಿತ್ತು.. ಕಡೆಗೂ 18 ದಿನಗಳ ನಂತರ ಖಾಕಿ ಖೆಡ್ಡಾಕೆ ಬಿದ್ದಿದ್ದಾರೆ.
ಜ್ಞಾನಜ್ಯೋತಿ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ, ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್, ಮೇಲ್ವಿಚಾರಕಿ ಅರ್ಚನಾ, ಸುನಂದಾ, ಪಿಎಸ್ಐ ಪರೀಕ್ಷಾರ್ಥಿ ಅಭ್ಯರ್ಥಿ ಶಾಂತಾಬಾಯಿ ಬಂಧನಕ್ಕೆ ಒಳಗಾಗಿದ್ದಾರೆ.
ನಿನ್ನೆ ಆರೋಪಿ ಜ್ಯೋತಿ ಪಾಟೀಲ್ ಬಂಧನವಾಗಿತ್ತು. ವಿಚಾರಣೆ ವೇಳೆ ದಿವ್ಯಾ ಸೇರಿ ಎಲ್ಲರು ಮಹಾರಾಷ್ಟ್ರದ ಪುಣೆಯಲ್ಲಿ ತಲೆಮರೆಸಿಕೊಂಡಿರುವದನ್ನು ಜ್ಯೋತಿ ಪಾಟೀಲ್ ಬಾಯ್ಬಿಟ್ಟಿದ್ದಳು. ತಡ ಮಾಡದೆ ರಾತ್ರಿಯೇ ಪುಣೆಗೆ ತೆರಳಿದ ಸಿಐಡಿ ತಂಡ, ರಾತ್ರಿ ಶೋಧ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.