ಹೊಸದಿಗಂತ ವರದಿ, ಕಲಬುರಗಿ:
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಬಗೆದಷ್ಟು ಆಳ ಹೋಗುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಅಫಜಲಪುರ ತಾಲೂಕಿನ ಕಾಂಗ್ರೆಸ್ ಶಾಸಕ ಎಮ್.ವೈ.ಪಾಟೀಲ್ ಗನ್ಮ್ಯಾನ್ ಸೇರಿದಂತೆ ಇಬ್ಬರು ಪೊಲೀಸ್ ಪೇದೆಗಳನ್ನು ಸಿಐಡಿ ಪೊಲೀಸರು ಬಂಧನ ಮಾಡಿದ್ದಾರೆ.
ಕಲಬುರಗಿ ಸಿಟಿ ಆರ್ಮ್ಸ್ ರಿಜರ್ವ್ (ಸಿಎಆರ್) ಪೊಲೀಸ್ ಪೇದೆ ರುದ್ರಗೌಡ ಮತ್ತು ಅಫಜಲಪುರ ಕಾಂಗ್ರೆಸ್ ಶಾಸಕ ಎಂ .ವೈ .ಪಾಟೀಲ್ ಗನ್ಮ್ಯಾನ್ ಅಯ್ಯಣ್ಣ ದೇಸಾಯಿ ಇಬ್ಬರನ್ನು ಸಿಐಡಿ ಪೋಲಿಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಶಾಸಕರ ಗನ್ಮ್ಯಾನ್ ಅಯ್ಯಣ್ಣ ದೇಸಾಯಿ ಪಿಎಸ್ಐ ಪರೀಕ್ಷೆ ಬರೆದಿದ್ದನು.ಆದರೆ, ರುದ್ರಗೌಡ ಪರೀಕ್ಷೆ ಬರೆದಿರಲಿಲ್ಲ, ಈತನ ಪಾತ್ರ ಏನು ಎನ್ನುವುದು ಸಿಐಡಿ ತಂಡದವರು ವಿಚಾರಣೆ ನಡಸುತ್ತಿದ್ದಾರೆ.ಅಯ್ಯಣ್ಣ ದೇಸಾಯಿ ಆರ್ಥಿಕವಾಗಿ ಸದೃಢನಲ್ಲದಿದ್ದರೂ, 30-40 ಲಕ್ಷ ರೂಪಾಯಿ ಹೇಗೆ ವ್ಯವಸ್ಥೆ ಮಾಡಿದ್ದನು, ಅಥವಾ ಇದರಲ್ಲಿ ಶಾಸಕ ಎಮ್.ವೈ. ಪಾಟೀಲ್ ಪ್ರಭಾವ ಏನಾದರೂ ನಡೆದಿದೆಯಾ? ಎನ್ನುವುದು ಕೂಡಾ ಸಿಐಡಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇಲ್ಲಿವರೆಗೆ ಬಿಜೆಪಿ ನಾಯಕರ ಸೂತ್ತು ಮಾತ್ರ ಸುತ್ತುತ್ತಿದ್ದ ಅಕ್ರಮದ ವಾಸನೆ ಈಗ ಕಾಂಗ್ರೆಸ್ ಪಕ್ಷಕ್ಕೂ ಅಂಟಿಕೊಂಡಿದೆ ಎಂಬ ಅನುಮಾನ ಕಾಡುತ್ತಿದೆ.