ಹೊಸದಿಗಂತ ವರದಿ, ಕಲಬುರಗಿ:
ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಗುರುವಾರ ತಾನೇ ಅಮಾನತ್ತುಗೊಂಡಿರುವ ಕೆ.ಎಸ್.ಆರ್.ಪಿ. ಅಸಿಸ್ಟೆಂಟ್ ಕಮಾಂಡೆಂಟ್ ವೈಜನಾಥ ರೇವೂರ ಅವರನ್ನು ಶುಕ್ರವಾರ ಸಿಐಡಿ ಅಧಿಕಾರಿಗಳು ಕಲಬುರಗಿ ನಗರದ ಉದನೂರ ಕ್ರಾಸ್ ಬಳಿ ಕರೆತಂದು ಸ್ಥಳದ ಮಹಜರ್ ಮಾಡಿಸಿದ್ದಾರೆ.
ಸಿಐಡಿ,ಯ ಡಿವೈಎಸ್ಪಿ ಪ್ರಕಾಶ್ ರಾಠೋಡ್ ನೇತೃತ್ವದಲ್ಲಿ ಸ್ಥಳದ ಮಹಜರ್ ನಡೆದಿದ್ದು,ಉದನೂರ ರಸ್ತೆಯ ಹಲವೆಡೆ ಕಿಂಗ್ ಪಿನ್ ಆರ್.ಡಿ.ಪಾಟೀಲ್, ವೈಜನಾಥ ರೇವೂರ ಮತ್ತು ಅವರ ತಂಡ ಸೇರಿ ಅಕ್ರಮದ ಡಿಲ್ ಬಗ್ಗೆ ಪ್ಲಾನ್ ಮಾಡಿದ್ದರು.
ಅಕ್ರಮದ ಡಿಲ್,ನ ಪ್ಲಾನ್ ಮಾಡುವಾಗ ಜೊತೆಗೆ ದಿವ್ಯಾ ಹಾಗರಗಿ ಕೂಡ ನಮ್ಮ ಜೊತೆಗೆ ಇದ್ದರು ಎಂಬ ಮಾಹಿತಿಯನ್ನು ಅಸಿಸ್ಟೆಂಟ್ ಕಮಾಂಡೆಂಟ್ ವೈಜನಾಥ ರೇವೂರ ಬಾಯಿಬಿಟ್ಟಿದ್ದಾನೆ.
ಉದನೂರ ರಸ್ತೆಯ ಸ್ಥಳದ ಮಹಜರ್ ಮುಗಿಸಿಕೊಂಡು ಆರ್.ಡಿ.ಪಾಟೀಲ್ ಅವರ ಮನೆಗೆ ಕರೆತಂದು ಅಲ್ಲಿಯೂ ಸಹ ಮನೆಯ ಸ್ಥಳದ ಮಹಜರ್,ನ್ನು ಸಿಐಡಿ ಅಧಿಕಾರಿಗಳು ಮಾಡಿದ್ದಾರೆ.
ವೈಜನಾಥ ರೇವೂರ ಸಿಐಡಿ ಕಸ್ಟಡಿ ಅಂತ್ಯ
ಪಿಎಸ್ಐ ನೇಮಕಾತಿ ಪರೀಕ್ಷೆ ಯ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿತವಾಗಿರುವ ಕೆ.ಎಸ್.ಆರ್.ಪಿ.ಅಸಿಸ್ಟೆಂಟ್ ಕಮಾಂಡೆಂಟ್ ವೈಜನಾಥ ರೇವೂರ ಅವರ ಸಿಐಡಿ ಕಸ್ಟಡಿಯೂ ಶುಕ್ರವಾರ ಅಂತ್ಯವಾಗಲಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ, ತದನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿದ್ದೇವೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.