ಹೊಸದಿಗಂತ ಡಿಜಿಟಲ್ ಡೆಸ್ಕ್:
31 ವರ್ಷಗಳ ಬಳಿಕ ಜ್ಞಾನವಾಪಿ ಆವರಣದಲ್ಲಿ ಪೂಜೆ, ಆರತಿ, ಶಂಖನಾದ ಕೇಳಿಸುತ್ತಿದೆ. ಮಸೀದಿಯ ನೆಲಮಹಡಿಯಲ್ಲಿರುವ ‘ವ್ಯಾಸ್ ಕೆ ಠಿಖಾನಾ’ದಲ್ಲಿನ ಶೃಂಗಾರ ಗೌರಿ ಸೇರಿದಂತೆ ಇತರ ಹಿಂದು ದೇವರ ಮೂರ್ತಿಗಳಿಗೆ ಪೂಜೆ ನಡೆದಿದೆ.
ಕಾಶಿ ವಿಶ್ವನಾಥ ಮಂದಿರ ಟ್ರಸ್ಟ್ ಸದಸ್ಯರು, ವ್ಯಾಸ ಕುಟುಂಬದ ಅರ್ಚಕರು ಇಂದು ಜ್ಞಾನವಾಪಿಯೊಳಗೆ ಪೂಜೆ ಸಲ್ಲಿಸಿದ್ದಾರೆ. ವಿಶೇಷ ಅಂದರೆ ಇನ್ನು ಮುಂದೆ ಪ್ರತಿ ದಿನ 5 ಬಾರಿ ಮೂರ್ತಿಗಳಿಗೆ ಪೂಜೆ ನೆರವೇರಲಿದೆ. ಇಲ್ಲಿನ ಪೂಜೆ, ಆರತಿ, ಶಂಖನಾದ ಆವರಣದ ಹೊರಗಿರುವ ನಂದಿಗೂ ಕೇಳಿಸಲಿದೆ.
ಈ ಕುರಿತು ವಕೀಲ ವಿಷ್ಣುಶಂಕರ್ ಜೈನ್ ಕೆಲ ಮಹತ್ವದ ಮಾಹಿತಿ ನೀಡಿದ್ದು, ಜ್ಞಾನವಾಪಿಪೂಜೆಗೆ ವಾರಣಾಸಿ ಕೋರ್ಟ್ ಅವಕಾಶ ಮಾಡಿಕೊಟ್ಟಿದೆ. ಇಲ್ಲಿ ಶಾಸ್ತ್ರೋಕ್ತ ಪೂಜೆ ನಡೆಯಲಿದೆ. ಪ್ರತಿ ದಿನ 5 ಬಾರಿ ವಿಶೇಷ ಆರತಿ ನಡೆಯಲಿದೆ. ಮುಂಜಾನೆ 3.30ಕ್ಕೆ ಮಂಗಳ ಆರತಿ ನಡೆಯಲಿದೆ. ಇನ್ನು ಮಧ್ಯಾಹ್ನ 12 ಗಂಟೆಗೆ ಭೋಗ ಆರತಿ, ಸಂಜೆ 4 ಗಂಟೆಗೆ ಅಪರಾಹ್ನ ಆರತಿ, ಸಂಜೆ 7 ಗಂಟೆಗೆ ಸಾಂಯಕಾಲ ಆರತಿ ಹಾಗೂ ರಾತ್ರಿ 10.30ಕ್ಕೆ ಶಯನ ಆರತಿ ನಡೆಯಲಿದೆ ಎಂದು ಹೇಳಿದ್ದಾರೆ.
ಹಿಂದು ಪೂಜಾ ಪದ್ಧತಿಯಂತೆ ಆರತಿ ವೇಳೆ ಗಂಟೆ, ಶಂಖನಾದ ಮೊಳಗಲಿದೆ. ನಿಲ್ಲಿಸಲಾದ ಪೂಜೆ ಹಾಗೂ ಪದ್ಧತಿಯನ್ನು ಪುನರ್ ಆರಂಭಿಸಲಾಗಿದೆ ಎಂದು ವಿಷ್ಣುಶಂಕರ್ ಜೈನ್ ಹೇಳಿದ್ದಾರೆ. ಇತ್ತ ಪೂಜೆ ಸಲ್ಲಿಸಿರುವ ವ್ಯಾಸ ಕುಟಂಬದ ಅರ್ಚಕ ಜಿತೇಂದ್ರ ನಾಥ ವ್ಯಾಸ ಸಂತಸ ವ್ಯಕ್ತಪಡಿಸಿದ್ದಾರೆ. ಮಸೀದಿಯಲ್ಲಿರುವ ವ್ಯಾಸ್ ಕೆ ಠಿಖಾನಾ ಸಂಕೀರ್ಣ ವ್ಯಾಸ ಕುಟುಂಬದ ವಶದಲ್ಲಿದೆ. ಆದರೆ ಕೆಲ 31 ವರ್ಷಗಳಿಂದ ಪೂಜೆ ಸಲ್ಲಿಸಲು ಅವಕಾಶವಿರಲಿಲ್ಲ. ಇದೀಗ ಕೋರ್ಟ್ ನೀಡಿರುವ ಅನುಮತಿಯಿಂದ ಮಹದೇವನಿಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ.