ಹೊಸದಿಗಂತ ಡಿಜಿಟಲ್ ಡೆಸ್ಕ್
ಗಡಿ ವಿವಾದದ ಕುರಿತಾಗಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಇತ್ತೀಚಿನ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ಮರಾಠ ಮಹಾಸಂಘದ ಸದಸ್ಯರು ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವೆ ಸಂಚರಿಸುವ ಬಸ್ಗಳ ಮೇಲೆ ಕಪ್ಪು ಮಸಿಯಲ್ಲಿ ‘ಜೈ ಮಹಾರಾಷ್ಟ್ರ’ ಸಂದೇಶ ಬರೆಯುವ ಮೂಲಕ ಉದ್ಧಟನ ಮೆರೆದಿದ್ದಾರೆ.
ಮರಾಠಾ ಮಹಾಸಂಘದ ಸದಸ್ಯರ ಗುಂಪು ಗುರುವಾರ ಪುಣೆ ಜಿಲ್ಲೆಯ ನಿಪ್ಪಾಣಿ-ಔರಂಗಾಬಾದ್ ನಡುವೆ ಸಂಚರಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಡಿ ಕಾರ್ಯನಿರ್ವಹಿಸುವ ಬಸ್ಗಳ ಮೇಲೆ ಕಪ್ಪು ಬಣ್ಣದಿಂದ ‘ಜಾಹಿರ್ ನಿಷೇಧ್’ ಮತ್ತು ‘ಜೈ ಮಹಾರಾಷ್ಟ್ರ’ ಎಂಬ ಪದಗಳನ್ನು ಬರೆಯುತ್ತಿರುವುದು ಕಂಡುಬಂದಿದೆ.
ಆನಂತರ ಬಸ್ ಎದುರು ನಿಂತು ಬೊಮ್ಮಾಯಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ನೀರಿನ ಸಮಸ್ಯೆ ಎದುರಿಸುತ್ತಿರುವ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕೆಲವು ಗ್ರಾಮಗಳು ಕರ್ನಾಟಕದೊಂದಿಗೆ ವಿಲೀನಗೊಳ್ಳುವ ನಿರ್ಣಯವನ್ನು ಅಂಗೀಕರಿಸಿವೆ ಎಂದು ಬೊಮ್ಮಾಯಿ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
ಮಹಾರಾಷ್ಟ್ರದಲ್ಲಿ ಗಡಿ ವಿವಾದ ರಾಜಕೀಯ ಅಸ್ತ್ರವಾಗಿ ಮಾರ್ಪಟ್ಟಿದ್ದು, ಅಧಿಕಾರದಲ್ಲಿರುವ ಯಾವುದೇ ಪಕ್ಷ ರಾಜಕೀಯ ಉದ್ದೇಶಕ್ಕಾಗಿ ಈ ವಿಷಯವನ್ನು ಪ್ರಸ್ತಾಪಿಸುತ್ತದೆ ಎಂದು ಬೊಮ್ಮಾಯಿ ಈ ಹಿಂದೆ ಹೇಳಿದ್ದರು.
ನನ್ನ ಸರ್ಕಾರವು ಕರ್ನಾಟಕದ ಗಡಿಯನ್ನು ರಕ್ಷಿಸಲು ಸಮರ್ಥವಾಗಿದೆ ಮತ್ತು ಕ್ರಮಗಳನ್ನು ಕೈಗೊಂಡಿದೆ ಎಂದು ಬೊಮ್ಮಾಯಿ ಹೇಳಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ