ಪಂಜಾಬ್ ಸಿಎಂಯೇ ಕುಡಿದು ಡ್ರೈವ್ ಮಾಡುತ್ತಾರೆ: ಕೌರ್​ ಬೈಗುಳಕ್ಕೆ ನಗೆಯಲ್ಲಿ ತೇಲಾಡಿದ ಸಂಸತ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಂಜಾಬ್​ ಮುಖ್ಯಮಂತ್ರಿ ಭಗವಂತ್​ ಮಾನ್​ ವಿರುದ್ಧ ಲೋಕಸಭೆಯಲ್ಲಿ ಇಂದು ಶಿರೋಮಣಿ ಅಕಾಲಿ ದಳ​ (ಎಸ್​ಎಡಿ)ದ ಸಂಸದೆ ಹರ್ಸಿಮೃತ್​ ಕೌರ್​ ಬಾದಲ್​ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪಂಜಾಬ್​​ನಲ್ಲಿ ಹೆಚ್ಚಿದ ಮಾದಕ ದ್ರವ್ಯ ಬಳಕೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಿಎಂ ಮಾನ್​​ ವಿರುದ್ಧ ಕಿಡಿಕಾರಿದ್ದಾರೆ. ಇತ್ತ ​ ಕೌರ್​ ಬಾದಲ್​ ಅವರು ಮಾನ್​​ಗೆ ಹಿಗ್ಗಾಮುಗ್ಗಾ ಬೈಯ್ಯುತ್ತಿದ್ದರೆ, ಅತ್ತ ಗೃಹ ಸಚಿವ ಅಮಿತ್​ ಶಾ, ಲೋಕಸಭೆ ಸ್ಪೀಕರ್​ ಓಂ ಬಿರ್ಲಾ ಮತ್ತು ಇತರ ಹಲವು ಸಂಸದರೆಲ್ಲ ಅವರ ಮಾತು ಕೇಳಿ ನಗಲು ಆರಂಭಿಸಿದ್ದಾರೆ.

ಕೌರ್​, ‘ಪಂಜಾಬ್​ ಮುಖ್ಯಮಂತ್ರಿ ಭಗವಂತ್​ ಮಾನ್​ ಕೆಲವೇ ತಿಂಗಳುಗಳ ಹಿಂದೆ ಇದೇ ಸಂಸತ್ತಿನ ಮೂಲೆಯೊಂದರಲ್ಲಿ ಕುಳಿತುಕೊಳ್ಳುತ್ತಿದ್ದರು​. ಬೆಳಗ್ಗೆಯೇ ಅದೇನು ತಿಂದು-ಕುಡಿದು ಬರುತ್ತಿದ್ದರೋ ಗೊತ್ತಿಲ್ಲ. ಸದಾ ಅಮಲೇರಿಸಿಕೊಂಡಿರುತ್ತಿದ್ದರು. ಅವರ ಪಕ್ಕ ಕುಳಿತುಕೊಳ್ಳಲು ಯಾರೂ ಮುಂದೆ ಬರುತ್ತಿರಲಿಲ್ಲ. ಅವರ ಪಕ್ಕ ಕುಳಿತುಕೊಂಡವರೆಲ್ಲ ‘ನಮ್ಮ ಸೀಟ್​ ಬದಲಿಸಿಕೊಡಿ’ ಎಂದು ಸ್ಪೀಕರ್​ ಬಳಿಯೇ ಕೇಳುತ್ತಿದ್ದರು. ಈ ಹಿಂದಿನ ಸ್ಪೀಕರ್​​ನ ಕೇಳಿನೋಡಿ, ಅವರ ಬಳಿಯಂತೂ ಅದೆಷ್ಟು ಮಂದಿ ಹೋಗಿ, ಮಾನ್​ ಬಗ್ಗೆ ದೂರಿದ್ದಾರೆ ಲೆಕ್ಕವಿಲ್ಲ. ಒಟ್ಟಿನಲ್ಲಿ ಜಾಗ ಬದಲಿಸಿಕೊಂಡು ಹೋಗುತ್ತಿದ್ದರು’ ಎಂದು ಹೇಳಿದರು.

 

ಪಂಜಾಬ್​​ನ ರಸ್ತೆಗಳ ಪಕ್ಕ ಅನೇಕ ಕಡೆ ‘ಕುಡಿದು ವಾಹನ ಚಲಾಯಿಸಬೇಡಿ’ ಎಂಬ ಬೋರ್ಡ್​​ನ್ನು ಹಾಕಿಡಲಾಗಿದೆ. ಆದರೆ ಸ್ವತಃ ಭಗವಂತ್​ ಮಾನ್ ಮದ್ಯಪಾನ ಮಾಡಿ ಇಡೀ ರಾಜ್ಯವನ್ನು ಡ್ರೈವ್ ಮಾಡುತ್ತಿದ್ದಾರೆ. ಇವರನ್ನು ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದಾಗ, ಅವರು ಕುಡಿತ ಬಿಡುವುದಾಗಿ ತಾಯಿ ಮೇಲೆ ಆಣೆ ಮಾಡಿದ್ದಾರೆ ಎಂದೆಲ್ಲ ಅರವಿಂದ್​ ಕೇಜ್ರಿವಾಲ್​ ಹೇಳಿದ್ದಾರೆ. ಅದನ್ನು ಮಹಾನ್​ ತ್ಯಾಗ ಎಂಬಂತೆ ಬಿಂಬಿಸಿದ್ದರು. ಆದ್ರೆ ಕುಡಿತ ಬಿಡುವುದು ತ್ಯಾಗವೇ’ ಎಂದು ಹರ್ಸಿಮೃತ್​ ಕೌರ್ ಪ್ರಶ್ನಿಸಿದರು.

ಹೀಗೆ​ ಕೌರ್​ ಅವರು ಭಗವಂತ್​ ಮಾನ್​​ಗೆ ಬೈಯುತ್ತಿದ್ದರೆ, ಅಮಿತ್​ ಶಾ, ಓಂಬಿರ್ಲಾ ಮತ್ತು ಉಳಿದೆಲ್ಲ ಸಂಸದರೂ ಜೋರಾಗಿ ನಗುತ್ತಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!