ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೂರ್ವ ಮಹಾರಾಷ್ಟ್ರದ ಅಮರಾವತಿಯ ಔಷಧ ವ್ಯಾಪಾರಿ ಉಮೇಶ್ ಪ್ರಹ್ಲಾದ್ ರಾವ್ ಕೊಲ್ಹೆ ಅವರನ್ನು ಸುನ್ನಿ ಇಸ್ಲಾಮಿಕ್ ಸಂಘಟನೆಯಾದ ತಬ್ಲಿಘಿ ಜಮಾತ್ನ ತೀವ್ರಗಾಮಿ ಇಸ್ಲಾಮಿಸ್ಟ್ಗಳು ಹತ್ಯೆ ಮಾಡಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ ಹೇಳಿದೆ.
ನೂಪೂರ್ ಶರ್ಮಾ ಅವರನ್ನು ಬೆಂಬಲಿಸಿ ಉಮೇಶ್ ಕೊಲ್ಹೆ ವಾಟ್ಸಪ್ನಲ್ಲಿ ಸ್ಟೇಟಸ್ ಹಾಕಿದ್ದರು. ಈ ಸ್ಟೇಟಸ್ ನೋಡಿ ನಮ್ಮ ಧರ್ಮಕ್ಕೆ ಅವಮಾನ ಮಾಡಿದ್ದಾರೆ ಎಂದು ತಿಳಿದು ಆರೋಪಿಗಳು ಹತ್ಯೆ ಮಾಡಿದ್ದಾರೆ ಎಂದು ಎನ್ಐಎ ಉಲ್ಲೇಖಿಸಿದೆ.
ಔಷಧ ವ್ಯಾಪಾರಿ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ(54) ಅವರ ಹತ್ಯೆಯ ತನಿಖೆ ನಡೆಸಿದ ಎನ್ಐಎ 11 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದೆ.
ಕೊಲ್ಹೆ ಜೂನ್ 21 ರಂದು ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ ಮೂವರು ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾಗಿದ್ದರು.
ಎಲ್ಲಾ ಆರೋಪಿಗಳು ತಬ್ಲೀಘಿ ಜಮಾತ್ ಸಂಘಟನೆಯ ಸದಸ್ಯರಾಗಿದ್ದರು. ಈ ಕೃತ್ಯದ ಮಾಸ್ಟರ್ ಮೈಂಡ್ ತಬ್ಲಿಘಿ ಜಮಾತ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದ ಎಂದು ಎನ್ಐಎ ಹೇಳಿದೆ.
ತಬ್ಲಿಘಿ ಜಮಾತ್ನ ತೀವ್ರಗಾಮಿ ಇಸ್ಲಾಮಿಸ್ಟ್ಗಳು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಉಮೇಶ್ ಕೊಲ್ಹೆಯನ್ನು ಹತ್ಯೆ ಮಾಡಿದ್ದಾರೆ. ಹಗೆತನ ಉತ್ತೇಜಿಸುವುದು, ವಿವಿಧ ಜಾತಿ ಮತ್ತು ಧರ್ಮಗಳ ನಡುವೆ ವಿಶೇಷವಾಗಿ ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ದ್ವೇಷ ಹಬ್ಬಿಸುವ ಮೂಲಕ ಸಾಮಾಜಿಕ ಸಾಮರಸ್ಯವನ್ನು ಕದಡಲು ಪ್ರಯತ್ನಿಸಿದೆ ಎದು ಎನ್ಐಎ ಹೇಳಿದೆ.
ಕೊಲ್ಹೆ ಜತೆ ಯಾವುದೇ ಆಸ್ತಿ ವಿವಾದ ಅಥವಾ ಇನ್ಯಾವುದೇ ಜಗಳ ಇಲ್ಲದೇ ಇದ್ದರೂ, ಆರೋಪಿಗಳು ಕೊಲ್ಹೆಯನ್ನು ಕೊಲ್ಲುವುದಕ್ಕೆ ಸಂಚು ಹೂಡಿದ್ದರು ಎಂದು ತನಿಖೆ ಬಹಿರಂಗಪಡಿಸಿದೆ.
ಸಾರ್ವಜನಿಕ ಜಾಗದಲ್ಲಿ ಮಗನ ಎದುರೇ ತಂದೆಯನ್ನು ಹತ್ಯೆಗೈದ ಕ್ರೌರ್ಯವನ್ನು ಚಾರ್ಜ್ ಶೀಟ್ ಹೇಳಿದ್ದು, ಸರಿಯಾದ ಯೋಜನೆ ಮತ್ತು ಕೃತ್ಯವೆಸಗಿದ ನಂತರ ಮಾಡಿದ ಸಂಭ್ರಮಾಚರಣೆ ಸಮಾಜದಲ್ಲಿ ಭಯ ಹುಟ್ಟಿಸುವುದಕ್ಕಾಗಿ ಮಾಡಿದ್ದಾಗಿತ್ತು ಎಂದು ತನಿಖಾ ಸಂಸ್ಥೆ ಹೇಳಿದೆ.