ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡಲು ಶೀಘ್ರ ಕ್ರಮ: ಸಚಿವ ಬಿ.ಶ್ರೀರಾಮುಲು

ಹೊಸದಿಗಂತ ವರದಿ, ಬಳ್ಳಾರಿ:
ಕಾರ್ಮಿಕರಿಗೆ ಶೀಘ್ರದಲ್ಲೇ ಉಚಿತ ಬಸ್ ಪಾಸ್ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ, ಪರಿಶಿಷ್ಟ ಪಂಗಡ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 73ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಬುಧವಾರ ಮಾತನಾಡಿದರು. ಕಟ್ಟಡ ಕಾರ್ಮಿಕರಿಗೂ ಬಸ್ ಪಾಸ್‌ ನೀಡುವ ಚಿಂತನೆಯಿದೆ, ಈ ಕುರಿತು ಚೆರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. 900 ಎಲೆಕ್ಟ್ರಿಕಲ್ ಬಸ್ ಗಳನ್ನು ಖರೀದಿಸಲಾಗಿದೆ, ಹಂತ ಹಂತವಾಗಿ ಎಲ್ಲ ಕಡೆಗಳಲ್ಲೂ ವಿಸ್ತರಿಸುವ ಚಿಂತನೆಯಿದೆ. ವಿಶೇಷವಾಗಿ ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಬಸ್ ಗಳ ವ್ಯವಸ್ಥೆ ಮಾಡುವೆ, ಇದು ಭರವಸೆಯಲ್ಲ ಮಾಡಿ ತೋರಿಸುವೆ, ಯಾವ ಮಕ್ಕಳು ಸಾರಿಗೆ ಸೌಲಭ್ಯದಿಂದ ವಂಚಿತರಾಗಬಾರದು ಎನ್ನುವ ಕಲ್ಪನೆ, ಚಿಂತನೆ ನನ್ನದಾಗಿದೆ ಎಂದರು.
ಬಳ್ಳಾರಿಗೆ ಸ್ಮಾರ್ಟ್ ಸಿಟಿ ತರುವ ಪ್ರಾಮಾಣಿಕ ಪ್ರಯತ್ನ ಮಾಡುವೆ, ಅವಧಿಯಲ್ಲಿ ಬಳ್ಳಾರಿಯನ್ನು ಬೆಂಗಳೂರು ಗ್ಲೋಬಲ್ ಸಿಟಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವೆ, ಇದು ನನ್ನ ಕನಸಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿ, ಅವದಿಯಲ್ಲಿ ‌ಜಿಲ್ಲೆಯನ್ನು ರಾಜ್ಯದಲ್ಲೇ ಮಾದರಿಯನ್ನಾಗಿ ಮಾಡುವೆ ಎಂದರು.
ನಾನಾ ಕಾರಣಗಳಿಂದ ನಷ್ಟ ಅನುಭಸುತ್ತಿರುವ ಸಾರಿಗೆ ಇಲಾಖೆಗೆ ಹೊಸ ಚೈತನ್ಯ ಮೂಡಿಸಲು‌ ಮುಂದಾಗಿರುವೆ,
ರಾಜ್ಯದ ನಾಲ್ಕು ನಿಗಮಗಳನ್ನು ಒಂದು ಮಾಡಬೇಕು ಎನ್ನುವ ಚಿಂತನೆ ನಡೆದಿದೆ. ಶ್ರೀನಿವಾಸ್ ಮೂರ್ತಿ ಅವರ ವರದಿ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಈ ಕುರಿತು ಸಿ.ಎಂ.ಅವರೊಂದಿಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಭಾಜಪ ಶಾಸಕರು ನಾನಾ ಪಕ್ಷಗಳ ಬಾಗಿಲ ಬಡಿಯುತ್ತಿದ್ದಾರೆ ಎನ್ನುವುದು ಶುದ್ದ ಸುಳ್ಳು, ಅಂತಹ ಸಮಸ್ಯೆ ಉದ್ಭವವಾಗಿಲ್ಲ, ಆಗೋದು‌ ಇಲ್ಲ, ಇದೆಲ್ಲ ಪ್ರತಿ ಪಕ್ಷದವರ ಕಲ್ಪನೆ, ಜನರಲ್ಲಿ ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ, ಅವರ ಈ ಕನಸು ಇಡೇರೋಲ್ಲ. ನಮ್ಮ ಪಕ್ಷದಲ್ಲಿ ಸದ್ಯಕ್ಕೆ ಅಂತಹ ಯಾವುದೇ ಬೆಳವಣಿಗೆಗಳು ‌ನಡದಿಲ್ಲ, ನಾವೆಲ್ಲರೂ ಒಗ್ಗಟ್ಟಾಗಿಯೇ ಇದ್ದೇವೆ, ನಮ್ಮಲ್ಲಿ ಯಾವುದೇ ಬಿನ್ನಾಭಿಪ್ರಾಯಗಳಿಲ್ಲ, ನಮ್ಮ ಕ್ಯಾಪ್ಟನ್ ಎಲ್ಲರನ್ನೂ ವಿಸ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ, ಜಿಲ್ಲಾ ಉಸ್ತುವಾರಿ ‌ನೇಮಕ ವಿಚಾರದಲ್ಲಿ ಕೆಲವರು ತಮ್ಮ ಅಭಿಪ್ರಾಯಗಳನ್ನು ‌ವ್ಯಕ್ತಪಡಿಸಿದ್ದಾರೆ, ಆದರೇ, ಸರ್ಕಾರ ಹಾಗೂ ಪಕ್ಷದ ನಾಯಕರು ನಮ್ಮನ್ನು ವಿಶ್ವಾಸಕ್ಕೆ ತುಗೋಂಡೇ ನೇಮಕ ಮಾಡಿದ್ದಾರೆ, ಸಿ.ಎಂ.ಬಸವರಾಜ್ ಬೊಮ್ಮಾಯಿ ಅವರು, ಎಲ್ಲರೋಂದಿಗೂ ಕಾನ್ಫರೆನ್ಸ್ ಮೂಲಕ ಮಾತನಾಡಿಯೇ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ, ಸರ್ಕಾರದ ತೀರ್ಮಾನವನ್ನು, ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದರು. ಈ ಸಂದರ್ಭದಲ್ಲಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಬೂಡಾ ಅಧ್ಯಕ್ಷ ಕಾರ್ಕಲತೋಟ ‌ಪಾಲನ್ನ, ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಪಾಟೆ, ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್, ಸಂಸದ ವೈ.ದೇವೇಂದ್ರಪ್ಪ, ಗ್ರಾಮೀಣ ಶಾಸಕ‌ ಬಿ.ನಾಗೇಂದ್ರ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!