ಹೊಸದಿಗಂತ ಡಿಜಿಟಲ್ ಡೆಸ್ಕ್ :
ಭಾರತ್ ಜೋಡೋ ಯಾತ್ರೆಯಲ್ಲಿ ಇತ್ತೀಚೆಗಷ್ಟೇ ಭಾಗವಹಿಸಿದ್ದ ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ರಾಹುಲ್ ಗಾಂಧಿ ‘ಪಪ್ಪು’ ಅಲ್ಲ “ಬುದ್ದಿವಂತ” ಆದರೆ ಅವರನ್ನು ಸಾರ್ವಜನಿಕವಾಗಿ ಮೂರ್ಖನಂತೆ ಬಿಂಬಿಸಿರುವುದು ದುರಾದೃಷ್ಟಕರ ಎಂದು ಹೇಳಿದ್ದಾರೆ.
ನಾನು ಹಲವು ವರ್ಷಗಳಿಂದ ಅವರೊಂದಿಗೆ ಸಂಪರ್ಕ ಹೊಂದಿದ್ದೇನೆ, ಅವರು ಯಾವುದೇ ರೀತಿಯಲ್ಲಿ ಪಪ್ಪು ಅಲ್ಲ ಬಹಳ ಬುದ್ದಿವಂತ ಎಂದು ಸಾರ್ವಜನಿಕವಾಗಿ ಮಾತನಾಡಿದ್ದಾರೆ.
“ಅವರು ಆದ್ಯತೆಗಳ ಬಗ್ಗೆ ಮತ್ತು ಮೂಲಭೂತ ಅಪಾಯಗಳ ಬಗ್ಗೆ ಉತ್ತಮ ಪ್ರಜ್ಞೆಯನ್ನು ಹೊಂದಿದ್ದಾರೆ ಮತ್ತು ಅವರು ಅದನ್ನು ಕಾರ್ಯರೂಪಕ್ಕೆ ತರಲು ಸಮರ್ಥರಾಗಿದ್ದಾರೆಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದರು.
ಇತ್ತೀಚೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯಲ್ಲಿ ರಾಜನ್ ಭಾಗವಹಿಸಿದ್ದರು. .
ಕೇಂದ್ರ ಸರ್ಕಾರದ ನೀತಿ ನಿರೂಪಕರ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ರಘುರಾಮ್ ರಾಜನ್, 2023 ಭಾರತೀಯ ಆರ್ಥಿಕತೆಗೆ ಮತ್ತು ಪ್ರಪಂಚದ ಇತರ ಭಾಗಗಳಿಗೆ ಕಷ್ಟಕರವಾಗಿರುತ್ತದೆ. ನಮ್ಮ ದೇಶವು ಬೆಳವಣಿಗೆಗೆ ಅಗತ್ಯವಾದ ಸುಧಾರಣೆಗಳನ್ನು ರಚಿಸಲು ವಿಫಲವಾಗಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಭಾರತವು ಈಗಾಗಲೇ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿರುವುದರಿಂದ ಪರಿಸ್ಥಿತಿಯು ಮುಂದೆ ಬದಲಾಗಬಹುದು. ಭಾರತ ಬೆಳೆಯುತ್ತಿದೆ ಮತ್ತು ತನ್ನನ್ನು ವಿಸ್ತರಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.