ದಿಗಂತ ವರದಿ ವಿಜಯಪುರ:
ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬರುತ್ತಾರೆ, ಹೋಗುತ್ತಾರೆ. ಇದು ಲಗೋರಿ ಆಟನಾ, ಖೋ ಖೋ ಆಟನಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ಗುರುವಾರ ಮಾತನಾಡಿದ ಅವರು, ಹಿಂದೆ ಆಡುತ್ತಿದ್ದರಲ್ಲ, ಖೋ ಖೋ ಆಟದಂತೆ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬರೋದು ಆಗಿದೆ ಎಂದರು.
ಖೋ ಖೋ ಆಡೋದು ಮತ್ತೆ ಹೋಗೋದು, ಮತ್ತೆ ಬರೋದು ಮಾಡುತ್ತಾರೆ. ಕೇಂದ್ರ ಸರ್ಕಾರ ಎಂದೂ ರಾಜ್ಯದ ಸಮಸ್ಯೆಗೆ ಸ್ಪಂದಿಸಿಲ್ಲ. ನದಿ ನೀರು ಹಂಚಿಕೆಗೆ ನಿರ್ಲಕ್ಷ್ಯ ಮಾಡಿ ಏತಕ್ಕೆ ಮತ ಕೇಳೋಕೆ ಬರುತ್ತಾರೆ ಅಂತ ಪ್ರಶ್ನಿಸಿದರು.
ನದಿ ನೀರು ಬಳಕೆ ಮಾಡೋಕೆ ಅವಕಾಶ ಕೊಡುತ್ತಿಲ್ಲ. ಇದು ಬಿಜೆಪಿ ಆಡಳಿತ ಆಗಿದೆ. ವಿಜಯಪುರದಲ್ಲಿ ನೀರಿದೆ, ಒಣಭೂಮಿ ಪ್ರದೇಶವಿದೆ, ಕೆಲಸ ಮಾಡದೇ ಬಂದರೆ ಜನ ಮೆಚ್ಚಿಕೊಳುತ್ತಾರಾ ? ಕರ್ನಾಟಕ ಜನತೆ ಬಹಳ ಬುದ್ಧಿವಂತರಿದ್ದಾರೆ. ಜನ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಜನರು ಬೇಸತ್ತು ಹೋಗಿದ್ದಾರೆ ಎಂದು ದೂರಿದರು.
ಹೀಗಾಗಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ತರಬೇಕೆಂದು ಜನರಲ್ಲಿ ಅಂಡರ್ ಕರೆಂಟ್ ಪಾಸ್ ಆಗುತ್ತಿದ್ದಾರೆ. ಅದಕ್ಕೆ ಪಂಚರತ್ನ ರಥಯಾತ್ರೆ ಮೂಲ ಎಂದರು.