ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಹಲವು ಭದ್ರತಾ ದೋಷಗಳಿವೆ ಎಂಬ ಕಾಂಗ್ರೆಸ್ ಪಕ್ಷದ ಆರೋಪಕ್ಕೆ ಕೇಂದ್ರ ಗೃಹ ಸಚಿವಾಲಯ ಪ್ರತಿಕ್ರಿಯೆ ನೀಡಿದೆ. ರಾಹುಲ್ ನಿಜವಾಗಿ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಒಂದಲ್ಲಾ ಎರಡಲ್ಲಾ ಬರೋಬ್ಬರಿ 113 ಬಾರಿ ಸಿಆರ್ಪಿಎಫ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಗೃಹ ಸಚಿವಾಲಯ ಗುರುವಾರ ಹೇಳಿದೆ. ಕಾಂಗ್ರೆಸ್ ದೆಹಲಿ ಪ್ರವಾಸ ಪ್ರವೇಶಕ್ಕೆ ಎರಡು ದಿನಗಳ ಮೊದಲು ಡಿಸೆಂಬರ್ 22 ರಂದು, ಭದ್ರತಾ ಮಾರ್ಗಸೂಚಿಗಳನ್ನು ಸ್ಥಾಪಿಸಲು ಎಲ್ಲಾ ಮುಂಗಡ ಭದ್ರತಾ ಸಂಪರ್ಕಗಳನ್ನು (ಎಎಸ್ಎಲ್) ನಡೆಸಲಾಯಿತು ಮತ್ತು ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿದೆ ಎಂದು ಸಿಆರ್ಪಿಎಫ್ ತಿಳಿಸಿದೆ.
ಆದರೆ, ರಾಹುಲ್ ಗಾಂಧಿ ಅವರೇ ಹಲವು ಸಂದರ್ಭಗಳಲ್ಲಿ ನಿಗದಿತ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಈ ಬಗ್ಗೆ ಕಾಲಕಾಲಕ್ಕೆ ಅವರಿಗೆ ತಿಳಿಸಿರುವುದಾಗಿ ಸಿಆರ್ಪಿಎಫ್ ಹೇಳಿದೆ. ಯಾತ್ರೆಯಲ್ಲಿ ಹಲವು ಭದ್ರತಾ ಲೋಪಗಳಾಗಿವೆ ಎಂದಿರುವ ಕಾಂಗ್ರೆಸ್, ರಾಹುಲ್ ಗಾಂಧಿಗೆ ಕೇಂದ್ರ ಸರ್ಕಾರ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಬುಧವಾರ ಒತ್ತಾಯಿಸಿತ್ತು.
ಈ ಸಂಬಂಧ ಪಕ್ಷದ ನಾಯಕ ಕೆಸಿ ವೇಣುಗೋಪಾಲ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ “ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ದೆಹಲಿ ಪೊಲೀಸರು ಯಾತ್ರೆಯ ವೇಳೆ ಹೆಚ್ಚುತ್ತಿರುವ ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಝಡ್ ಪ್ಲಸ್ ಭದ್ರತೆಯನ್ನು ನಿಯೋಜಿಸಿರುವ ರಾಹುಲ್ ಗಾಂಧಿಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.” ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಸಂಚರಿಸುವ ಮಾರ್ಗದಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸಬೇಕಿದೆ ಎಂದರು.