ಹೊಸದಿಗಂತ ಡಿಜಿಟಲ್ ಡೆಸ್ಕ್:
ಜ.14ರಂದು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಆರಂಭವಾಗಲಿರುವ ‘ಭಾರತ ಜೋಡೋ ನ್ಯಾಯ ಯಾತ್ರೆ’ಗೆ ಮಣಿಪುರದ ಥೌಬಲ್ ಜಿಲ್ಲೆಯಿಂದ ಚಾಲನೆ ಸಿಗಲಿದೆ.
ಈ ಕುರಿತು ಕಾಂಗ್ರೆಸ್ ಶುಕ್ರವಾರ ಮಾಹಿತಿ ನೀಡಿದ್ದು, ‘ಇಂಫಾಲ್ ನಗರದ ಹಪ್ತಾ ಕಂಗ್ಜೀಬಂಗ್ ಮೈದಾನದಿಂದ ಯಾತ್ರೆ ಆರಂಭಿಸಲು ಪಕ್ಷವು ಅನುಮತಿ ಕೋರಿತ್ತು.
ಆದ್ರೆ ಮಣಿಪುರ ಸರ್ಕಾರ ಅನುಮತಿ ನೀಡಲಿಲ್ಲ. ಆದರೆ, ಬೇರೆ ಸ್ಥಳದಿಂದ ಯಾತ್ರೆಗೆ ಚಾಲನೆ ನೀಡಬೇಕು ಎಂಬ ಷರತ್ತಿನೊಂದಿಗೆ ಅನುಮತಿ ನೀಡಲಾಗಿದೆ. ಹೀಗಾಗಿ, 34 ಕಿ.ಮೀ. ದೂರದ ಥೌಬಲ್ ಜಿಲ್ಲೆಯಿಂದ ಈ ಯಾತ್ರೆ ಆರಂಭಿಸಲಿದ್ದೇವೆ’ ಎಂದು ಮಣಿಪುರದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೀಶಮ್ ಮೇಘಚಂದ್ರ ಹೇಳಿದ್ದಾರೆ.
‘ಇಂಫಾಲ್ದಿಂದ ಯಾತ್ರೆ ಆರಂಭಕ್ಕೆ ಅನುಮತಿ ಕೋರಿ, ಈ ಮೊದಲು ಜ. 2ರಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಅನುಮತಿ ನೀಡಲಿಲ್ಲ. ಜ. 10ರಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರನ್ನು ಭೇಟಿ ಮಾಡಿದೆವು. ಆಗಲೂ, ಅನುಮತಿ ನೀಡಲಿಲ್ಲ’ ಎಂದರು.ಅದೇ ದಿನ ರಾತ್ರಿ ಅನುಮತಿ ನೀಡಿ ಆದೇಶ ಹೊರಡಿಸಲಾಯಿತಾದರೂ, ಸಾವಿರಕ್ಕಿಂತ ಹೆಚ್ಚು ಜನರು ಪಾಲ್ಗೊಳ್ಳಬಾರದು ಎಂಬುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಯಿತು’ ಎಂದು ಹೇಳಿದ್ದಾರೆ.
‘ಥೌಬಲ್ ಜಿಲ್ಲೆಯ ಖೋಂಗ್ಜೊಮ್ ಪ್ರದೇಶದ ಖಾಸಗಿ ಜಾಗವೊಂದರಿಂದ ಯಾತ್ರೆ ಆರಂಭಿಸಲು ಜಿಲ್ಲಾಧಿಕಾರಿ ಗುರುವಾರ ರಾತ್ರಿ ಅನುಮತಿ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯಾತ್ರೆಗೆ ಚಾಲನೆ ನೀಡುವರು’ ಎಂದು ಅವರು ಹೇಳಿದ್ದಾರೆ.
ಭಾರತ ಜೋಡೊ ನ್ಯಾಯ ಯಾತ್ರೆಯು ಮಾರ್ಚ್ 20ರಂದು ಮುಂಬೈನಲ್ಲಿ ಮುಕ್ತಾಯವಾಗಲಿದೆ. 67 ದಿನಗಳ ಈ ಯಾತ್ರೆಯು 15 ರಾಜ್ಯಗಳ 110 ಜಿಲ್ಲೆಗಳ ಮೂಲಕ ಸಾಗಿ ಒಟ್ಟು 6,713 ಕಿ.ಮೀ. ಕ್ರಮಿಸಲಿದೆ.