ಹೊಸದಿಗಂತ ವರದಿ,ಚಿತ್ರದುರ್ಗ
ಪತ್ನಿಯ ಶೀಲ ಶಂಕಿಸಿದ ಪತಿ ತನ್ನ ಹೆಂಡತಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇಲ್ಲಿನ ನೆಹರು ನಗರ ಬಡಾವಣೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಗಂಡನಿಂದ ಹತ್ಯೆಯಾದ ಮಹಿಳೆಯನ್ನು ರೇಣುಕಾ (೪೦) ಎಂದು ಗುರುತಿಸಲಾಗಿದೆ. ಪತ್ನಿಯನ್ನು ಕೊಲೆ ಮಾಡಿರುವ ಪತಿ ಮಂಜುನಾಥ್ ತಲೆ ಮರೆಸಿಕೊಂಡಿದ್ದಾನೆ.
ಕಳೆದ ೨೦ ವರ್ಷಗಳ ಹಿಂದೆ ವಿವಾಹವಾಗಿದ್ದ ರೇಣುಕಾ ಹಾಗೂ ಮಂಜುನಾಥ್ ನೆಹರು ನಗರದ ೧ ನೇ ಕ್ರಾಸ್ನಲ್ಲಿ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ರೇಣುಕಾ ಹಾಗೂ ಮಂಜುನಾಥ್ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಇವರಿಬ್ಬರಿಗೂ ಮದುವೆ ಮಾಡಿಕೊಡಲಾಗಿದೆ. ಹೆಣ್ಣುಮಕ್ಕಳಿಬ್ಬರೂ ಬೇರೆ ಊರಿನಲ್ಲಿ ವಾಸವಿದ್ದರಿಂದ ನೆಹರು ನಗರದ ಮನೆಯಲ್ಲಿ ರೇಣುಕಾ ಮತ್ತು ಮಂಜುನಾಥ್ ಇಬ್ಬರೇ ವಾಸವಾಗಿದ್ದರು.
ಇತ್ತಿಚೀನ ದಿನಗಳಲ್ಲಿ ರೇಣುಕಾ ಅವರ ಶೀಲ ಶಂಕಿಸಿ ಪತಿ ಮಂಜುನಾಥ್ ಪ್ರತಿದಿನ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಗುರುವಾರ ರಾತ್ರಿ ಎಂದಿನಂತೆ ಮಂಜುನಾಥ್ ಗಲಾಟೆ ಮಾಡಿದ್ದಾನೆ. ನಂತರ ರೇಣುಕಾ ಮಲಗಿದ್ದ ವೇಳೆ ಮಂಜುನಾಥ್ ಚಾಕುವಿನಿಂದ ಹೆಂಡತಿ ರೇಣುಕಾ ಅವರ ಕತ್ತನ್ನು ಕೊಯ್ದು ಕೊಲೆ ಮಾಡಿದಾನೆ. ಬಳಿಕ ಮನೆಗೆ ಬೀಗ ಜಡಿದು ಪರಾರಿಯಾಗಿದ್ದಾನೆ.
ಪಕ್ಕದ ಮನೆಯಲ್ಲೇ ವಾಸವಿದ್ದ ರೇಣುಕಾ ಅವರ ತಾಯಿ ಬೆಳಗ್ಗೆಯಿಂದ ಫೋನ್ ಮಾಡಿದ್ದಾರೆ. ಫೋನ್ಗೆ ಯಾವುದೇ ಸ್ಪಂದನೆ ಸಿಗದ ಕಾರಣ ಮತ್ತೊಂದು ಕೀ ಬಳಸಿ ಮನೆಯ ಬೀಗ ತೆಗೆದು ನೋಡಿದಾಗ ರೇಣುಕಾ ಕೊಲೆಯಾಗಿರುವುದು ಪತ್ತೆಯಾಗಿದೆ.
ವಿಷಯ ತಿಳಿದ ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಆರೋಪಿ ಮಂಜುನಾಥ್ಗಾಗಿ ಹುಡುಕಾಟ ನಡೆಸಿದ್ದಾರೆ.