ಹೊಸದಿಗಂತ ವರದಿ ಹುಬ್ಬಳ್ಳಿ:
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣೆ ಪ್ರಚಾರಕ್ಕೆ ಹೋದಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಬಂದ ಪುಟ್ಟ ಹೋದ ಪುಟ್ಟ ಅನ್ನೊ ಹಾಗಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು.
ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರಿಗೆ ಕನ್ನಡ ಜನತೆ, ಕನ್ನಡ ನೆಲ, ಜಲ ಭಾಷೆ ಅರ್ಥ ಮಾಡಿಕೊಂಡಿಲ್ಲ. ಅವರ ಹತ್ತಿರ ಕನ್ನಡಿಗರ ಮನಸ್ಸನ್ನು ಗೆಲ್ಲಲು ಯಾವುದೇ ಆಯುಧವಿಲ್ಲ ಎಂದರು.
ಭಾರತ್ ಜೋಡೋ ಯಾತ್ರೆ ಕೂಡಾ ಯಾವುದೇ ರೀತಿ ಮತವಾಗಿ ಪರಿವರ್ತನೆಯಾಗಿಲ್ಲ. ಗುಜರಾತಿ ಚುನಾವಣೆಯಲ್ಲಿ ಜೋಡೋ ಯಾತ್ರೆ ಮಾಡಿದ್ದರು. ಆದರೆ ಬಿಜೆಪಿ ಈ ಬಾರಿ ಹೆಚ್ಚಿನ ಸ್ಥಾನ ಅಲ್ಲಿ ಗೆದ್ದಿದೆ ಎಂದು ತಿಳಿಸಿದರು.
ಉರಿಗೌಡ, ನಂಜೆಗೌಡ ಕುರಿತು ಕುಮಾರಸ್ವಾಮಿ ಹೇಳಿಕೆ ಪ್ರತಿಕ್ರಿಸಿದ ಅವರು, ಅವರಿಬ್ಬರು ಸ್ವಾಭಿಮಾನಿಗಳು. ಧರ್ಮ ದೇವಸ್ಥಾನ ಉಳಿವಿಗೆ ಹೋರಾಟ ಮಾಡಿದವರು. ಹಿಂದೂಗಳ ಕ್ರೈಸ್ತ ನರಮೇಧ ಖಂಡಿಸಿ ಹೋರಾಟ ಮಾಡಿದ್ದಾರೆ ಎಂದರು.
ಟಿಪ್ಪು ಹಿಂದೂಗಳ ಕೊಂದು ಹಾಕಿದ್ದ, ಅವನು ಕನ್ನಡದ ವಿರೋಧಿ. ಅಂತಹ ಟಿಪ್ಪುವಿನ ವಿರುದ್ಧ ಹೋರಾಡಿದ ಹೋರಾಟಗಾರು ಇವರಿಬ್ಬರು. ಆದರೆ ಜೆಡಿಎಸ್ ಹಾಗೂ ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆಗಾಗಿ ಉರಿಗೌಡ, ನಂಜೆಗೌಡ ಅವರನ್ನು ಅವಹೇಳನ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.