ಹೊಸ ದಿಗಂತ ಡಿಜಿಟಲ್ ಡೆಸ್ಕ್
ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿರುವ ವೇಳೆಯಲ್ಲೇ , ಮತ್ತೆ ರಾಜಸ್ಥಾನ ಕಾಂಗ್ರೆಸ್ ನಲ್ಲಿ ಬಿಕ್ಕಟ್ಟು ತೀವ್ರಗೊಂಡಿದ್ದು, ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಸುಖಜೀಂದರ್ ಸಿಂಗ್ ರಾಂಧವಾ ಅವರು ರಾಜ್ಯದ ಪಕ್ಷದ ಎಲ್ಲಾ ಸಹ-ಪ್ರಭಾರಿಗಳ ಸಭೆ ನಡೆಸಿದ್ದಾರೆ.
2020ರಲ್ಲಿ ಸಚಿನ್ ಪೈಲಟ್ ಬಂಡಾಯ ಎದ್ದ ಸಂದರ್ಭ, ತನ್ನ ಸರ್ಕಾರ ಉಳಿಸಲು ಹಿಂದಿನ ಮುಖ್ಯಮಂತ್ರಿ ವಸುಂಧರಾ ರಾಜೇ ನೆರವು ನೀಡಿದ್ದರು ಎಂಬ ಹಾಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇತ್ತೀಚಿಗೆ ನೀಡಿರುವ ಹೇಳಿಕೆಯಿಂದ ರಾಜಸ್ಥಾನ ಕಾಂಗ್ರೆಸ್ ನಲ್ಲಿ ಹೊಸ ಬಿಕ್ಕಟ್ಟು ಉಂಟಾಗಿದೆ. ಇದೇ ವೇಳೆ ವಸುಂಧರಾ ರಾಜೆ ಸರಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿರುವ ಪೈಲಟ್ , ಗೆಹ್ಲೋಟ್ ಸರಕಾರ ಈ ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸಿಲ್ಲ ಎಂದೂ ಆರೋಪಿಸಿದ್ದಾರೆ.
ಈ ಮೂಲಕ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಮತ್ತು ಪಕ್ಷ ಹೈಕಮಾಂಡನ್ನು ಒತ್ತಡಕ್ಕೆ ಸಿಲುಕಿಸಿದ್ದಾರೆ. ವರ್ಷಾಂತ್ಯಕ್ಕೆ ರಾಜಸ್ತಾನ ವಿಧಾನಸಭಾ ಚುನಾವಣೆ ನಡೆಯಲಿದ್ದು, ರಾಜಸ್ತಾನ ಕಾಂಗ್ರೆಸ್ ಸರಕಾರದ ವೈಫಲ್ಯಗಳು ಮತ್ತು ಸರಕಾರದಲ್ಲಿನ ಆಂತರಿಕ ಬಿಕ್ಕಟ್ಟು ಕಾಂಗ್ರೆಸನ್ನು ತೀವ್ರ ಚಿಂತೆಗೀಡು ಮಾಡಿದೆ.