ಹೊಸದಿಗಂತ ವರದಿ,ಕಲಬುರಗಿ:
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಒಂದನೇ ಹಾಗೂ ಎರಡನೇ ಪಟ್ಟಿ ಈಗಾಗಲೇ ಬಿಡುಗಡೆ ಆಗಿದ್ದು,ನನ್ನ ಹೆಸರು ಎರಡು ಪಟ್ಟಿಯಲ್ಲಿ ಇಲ್ಲ.ಆದರೆ, ಸೇಡಂ ಕ್ಷೇತ್ರದ ಟಿಕೆಟ್ ನನಗೆ ಸಿಗಲಿದೆ ಎಂಬ ವಿಶ್ವಾಸವನ್ನು ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ವ್ಯಕ್ತಪಡಿಸಿದರು.
ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಟಿಕೆಟ್ ನನಗೆ ನೀಡದೇ ಹೋದಲ್ಲಿ ನಾನೆನೂ ಅಳುವುದು, ಗೋಳಾಡುವುದು ಮಾಡುವುದಿಲ್ಲ. ಸಾಮಾನ್ಯ ಕಾಯ೯ಕತ೯ನಿಗೂ ಟಿಕೆಟ್ ನೀಡಿದರು ಅವರ ಪರವಾಗಿ ಕೆಲಸ ಮಾಡುವುದಾಗಿ ಹೇಳಿದರು.
ಪ್ರತಿಯೊಂದು ಪಕ್ಷ ತಂತ್ರಗಾರಿಕೆ ಮೇಲೆ ಟಿಕೆಟ್ ಘೋಷಣೆ ಮಾಡುತ್ತದೆ.ಬಿಜೆಪಿ ಪಕ್ಷವು ಕೂಡ ತಂತ್ರಗಾರಿಕೆ ಭಾಗವಾಗಿ ಕೆಲವರ ಟಿಕೆಟ್ ಇನ್ನೂ ಘೋಷಣೆ ಮಾಡಿಲ್ಲ ಎಂದ ಅವರು, ನಾನು ಟಿಕೆಟ್ ಸಲುವಾಗಿ ಯಾರ ಮನೆಯ ಬಾಗಿಲಿಗೂ ಹೋಗುವುದಿಲ್ಲ ಎಂದು ಹೇಳಿದರು.
ಇನ್ನೂ ನನಗೆ ಟಿಕೆಟ್ ಘೋಷಣೆ ಆಗದ ಕಾರಣ ಕಾಂಗ್ರೆಸ್ ಪಕ್ಷದವರು ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ.ಹಾಕಿಕೊಳ್ಳಲಿ ಎನೂ ತೊಂದರೆಯಿಲ್ಲ.ಅವರು ಕೆಲ ದಿನಗಳ ಮಟ್ಟಿಗಾದರೂ ಸಂತೋಷದಿಂದ ಇರಲಿ ಎಂದ ಅವರು,ನಮ್ಮದು ರಾಷ್ಟ್ರೀಯ ಪಕ್ಷ, ಆದರೂ ಎರಡೆ ದಿನಗಳಲ್ಲಿ ಇನ್ನೂರಕ್ಕೂ ಹೆಚ್ಚು ಅಭ್ಯರ್ಥಿಗಳ ಟಿಕೆಟ್ ಘೋಷಣೆ ಮಾಡಿದೆ.ಆದರ,ಕಾಂಗ್ರೆಸ್,ಜೆಡಿಎಸ್ ಪಕ್ಷಕ್ಕೆ ಇಷ್ಟೊಂದು ಟಿಕೆಟ್ ಘೋಷಣೆ ಮಾಡಲು ಆಗಿಲ್ಲ ಎಂದು ಹೇಳಿದರು.