ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗುವ ಬೆಳವಣಿಗೆಯೊಂದು ನಡೆದಿದೆ. ಮಾಜಿ ಎಂಎಲ್ಸಿ ಕೆ. ಕವಿತಾ ತಮ್ಮದೇ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಸಮೀಕರಣಗಳಿಗೆ ವೇದಿಕೆ ಸಿದ್ಧವಾಗುತ್ತಿದೆ.
‘ತೆಲಂಗಾಣ ರಾಷ್ಟ್ರ ಸೇನಾ’ ಎಂಬ ಹೆಸರಿನ ಹೊಸ ಪಕ್ಷವನ್ನು ಅವರು ಶನಿವಾರ ಅಧಿಕೃತವಾಗಿ ಆರಂಭಿಸಿದ್ದಾರೆ. ಹಲವು ದಿನಗಳಿಂದ ಹೊಸ ರಾಜಕೀಯ ವೇದಿಕೆ ನಿರ್ಮಾಣದ ಬಗ್ಗೆ ಕೇಳಿಬರುತ್ತಿದ್ದ ಊಹಾಪೋಹಗಳಿಗೆ ಈ ಘೋಷಣೆ ಅಂತಿಮ ಮುದ್ರೆ ಬಿದ್ದಂತಾಗಿದೆ.
ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿಯಾಗಿರುವ ಕವಿತಾ, ಬಿಆರ್ಎಸ್ ಪಕ್ಷದಲ್ಲಿ ಪ್ರಭಾವಿ ನಾಯಕಿಯಾಗಿ ಗುರುತಿಸಿಕೊಂಡಿದ್ದರು. ಆದರೆ ನಾಯಕತ್ವದೊಂದಿಗೆ ಉಂಟಾದ ಭಿನ್ನಾಭಿಪ್ರಾಯಗಳ ಬಳಿಕ ಅವರು ಪಕ್ಷದಿಂದ ದೂರವಾಗಿದ್ದು, ಬಳಿಕ ತಮ್ಮ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ:
ಪಕ್ಷ ತೊರೆದ ನಂತರ ‘ತೆಲಂಗಾಣ ಜಾಗೃತಿ’ ಸಂಘಟನೆಯ ಮೂಲಕ ಜನರೊಂದಿಗಿನ ಸಂಪರ್ಕವನ್ನು ಮುಂದುವರಿಸಿದ್ದ ಕವಿತಾ, ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಸ ಮಾಡಿ ಜನಾಭಿಪ್ರಾಯ ಸಂಗ್ರಹಿಸಿದ್ದರು. ಇದೇ ರಾಜಕೀಯ ಚಟುವಟಿಕೆಯ ಮುಂದುವರಿದ ಭಾಗವಾಗಿ ಇದೀಗ ಹೊಸ ಪಕ್ಷವನ್ನು ಘೋಷಿಸಿದ್ದಾರೆ.
ಹೊಸ ಪಕ್ಷದ ಮೂಲಕ ತೆಲಂಗಾಣದ ಜನರ ಧ್ವನಿಯಾಗುವ ಗುರಿ ಹೊಂದಿರುವುದಾಗಿ ಕವಿತಾ ತಿಳಿಸಿದ್ದು, ಮುಂದಿನ ದಿನಗಳಲ್ಲಿ ಈ ಬೆಳವಣಿಗೆ ರಾಜ್ಯ ರಾಜಕೀಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.



