ಹೊಸ ದಿಗಂತ ವರದಿ, ಶಿವಮೊಗ್ಗ:
ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಲಲಾ ಪ್ರಾಣ ಪ್ರತಿಷ್ಠೆ ನಡೆಯಲಿರುವ ಹಿನ್ನೆಲೆಯಲ್ಲಿ ಜನವರಿ 01 ರಿಂದ 15ರವರೆಗೆ ಮನೆ ಮನೆ ಸಂಪರ್ಕ ಅಭಿಯಾನ ನಡೆಯಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ, ಅಭಿಯಾನದಲ್ಲಿ ಕಾರ್ಯಕರ್ತರು ಮನೆಮನೆಗೆ ತೆರಳಿ ಪ್ರಸಾದ ತಲುಪಿಸಲಿದ್ದಾರೆ. ಜನವರಿ 22 ರಂದು ಮಾಡಬೇಕಿರುವ ಕಾರ್ಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದರು.
ವಿಶ್ವಹಿಂದೂ ಪರಿಷತ್, ಪರಿವಾರದ ಎಲ್ಲಾ ಸಂಘಟನೆಗಳು ಹಾಗೂ ಶ್ರೀರಾಮ ‘ಭಕ್ತರನ್ನು ಜೋಡಿಸಿಕೊಂಡು ಸಂಪರ್ಕ ಅಭಿಯಾನ ನಡೆಸಲಾಗುವುದು. ಜ.7 ರಂದು ವಿಶೇಷ ಸಂಪರ್ಕ ಅಭಿಯಾನ ನಡೆಯಲಿದೆ. ಇದಕ್ಕಾಗಿ ವಿವಿಧ ಹಂತದಲ್ಲಿ ಸಭೆ ನಡೆಸಲಾಗಿದೆ. ಎಲ್ಲಾ ಸಿದ್ಧತೆ ನಡೆಸಲಾಗಿದೆ. ಡಿ.30 ರಂದು ಶಿವಮೊಗ್ಗದ ಮೈಲಾರೇಶ್ವರ ದೇವಾಲಯದಲ್ಲಿ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮ ಸಂಜೆ
4.30ಕ್ಕೆ ನಡೆಯಲಿದೆ ಎಂದು ತಿಳಿಸಿದರು.
ರಾಮಮಂದಿರ ಎಂಬುದು ಕೇವಲ ಮಂದಿರ ಅಲ್ಲ. ಅದೊಂದು ರಾಷ್ಟ್ರಮಂದಿರ. ಇದೊಂದು ಮಂದಿರದ ಪುನರುಜ್ಜೀವನ ಕಾರ್ಯಕ್ರಮ. ಶ್ರೀರಾಮ ಮರ್ಯಾದ ಪುರುಷೋತ್ತಮ. ರಾಮ ಸಾಂಸ್ಕೃತಿಕ ಸ್ವರೂಪ. ಹಾಗಾಗಿ ಈ ಕಾರ್ಯ ಸಂಭ್ರಮ, ಭಕ್ತಿ, ಸಂತಸದಿಂದ ಆಗಬೇಕು ಎಂಬುದು ಎಲ್ಲರ ಅಪೇಕ್ಷೆ ಎಂದರು.
ವಿಶ್ವಹಿಂದು ಪರಿಷತ್ ವಿಭಾಗದ ಸಹ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ ಸುದ್ದಿಗೋಷ್ಟಿಯಲ್ಲಿದ್ದರು.